ಬೆಳಗಾವಿ: ಬಸ್ ಗಳಿಲ್ಲದೆ ಬಿಕೋ ಎನ್ನುತ್ತಿರುವ ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ಒಂದು ಕಡೆಯಾದರೆ, ಇನ್ನೊಂದು ಕಡೆ ಪ್ರಯಾಣಿಕರು ಈ ಪರಿಸ್ಥಿತಿ ಯಾವತ್ತು ಸುಧಾರಿಸುತ್ತದೆ ಎಂದು ನಿಟ್ಟುಸಿರುಬಿಡುತ್ತಿದ್ದಾರೆ. ಹೌದು ವಿವಿಧ ಬೇಡಿಕೆ ಈಡೇರಿಸುವಂತೆ ಸಾರಿಗೆ ನೌಕರರು ಕಳೆದೆರೆಡು ದಿನಗಳಿಂದ ಧರಣಿ ನಡೆಸುತ್ತಿದ್ದು ಅದು ಇವತ್ತಿಗೂ ಕೂಡ ಮುಂದುವರೆದಿದೆ. ಒಂದು ಕಡೆ ಪ್ರತಿಭಟನಾಕಾರರಿಗೆ ಸರ್ಕಾರ ಸ್ಪಂದಿಸುತ್ತಿಲ್ಲ
ಎಂದು ಅವರು ಧರಣಿಯನ್ನು ಮುಂದುವರೆಸಿದರೆ ಇತ್ತ ತಮ್ಮ ದಿನ ನಿತ್ಯದ ಕಾರ್ಯಗಳಿಗೆ ತೊಡುಗುವ ಪ್ರಯಾಣಿಕರು, ವಿದ್ಯಾರ್ಥಿಗಳ ಪರಿಸ್ಥಿತಿ ಹೇಳತೀರದು. ಈ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವಂತೆ ಇದರ ಲಾಭವನ್ನು ಖಾಸಗಿ ವಾಹನ ಸವಾರರು ಪಡೆಯುತ್ತಿದ್ದಾರೆ.
ಅನಿವಾರ್ಯವಾಗಿ ಜನರು ಖಾಸಗಿ ವಾಹನಗಳತ್ತ ಮುಖ ಮಾಡುತ್ತಿದ್ದರೆ ಅವರು ಸಿಕ್ಕಿದ್ದೇ ಲಾಭ ಎಂದು ದುಪ್ಪಟ್ಟು ಹಣವನ್ನು ಪ್ರಯಾಣಿಕರಿಂದ ವಸೂಲಿಗೆ ಇಳಿದಿದ್ದಾರೆ. ಗಡಿನಾಡು ಬೆಳಗಾವಿಗೆ ಹೊರ ರಾಜ್ಯ ಗೋವಾ, ಮಹಾರಾಷ್ಟ್ರಕ್ಕೆ ಹೆಚ್ಚಿನ ಜನ ಪ್ರಯಾಣಿಸುತ್ತಾರೆ, ಜೊತೆಗೆ ರಾಜ್ಯದ ಹಲವು ಜಿಲ್ಲೆ, ತಾಲೂಕಿನಿಂದ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಾರೆ.
ಇಂತಹ ಪರಿಸ್ಥಿತಿಯಲ್ಲಿ ಪ್ರಯಾಣಿಕರು ಅತೀ ಹೆಚ್ಚಿನ ಸಂಕಟಕ್ಕೆ ಸಿಲುಕಿರುವುದಂತು ನಿಜಾ. ಇನ್ನಾದರೂ ಸಾರ್ವಜನಿಕರ ಪರಿಸ್ಥಿತಿ ಅರಿತು ಸಾರಿಗೆ ನೌಕರರು ಹಾಗೂ ಸರ್ಕಾರ ಇತ್ತ ಗಮನಹರಿಸಬೇಕು ಎನ್ನುವುದು ಎಲ್ಲರ ಆಶಯವಾಗಿದೆ.