ಗೋಕಾಕ : ಬೆಳಗಾವಿ ಲೋಕಸಭಾ ಉಪಚುನಾವಣೆ ದಿನಾಂಕ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ. ಯಾವುದೇ ಕ್ಷಣದಲ್ಲಾದರೂ ಚುನಾವಣಾ ದಿನಾಂಕ ಘೋಷಣೆ ಆಗಲಿದೆ. ಈ ನಡುವೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಜಿಲ್ಲೆಯ ಬಹಳಷ್ಟು ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಆಹ್ವಾನ ನೀಡುತ್ತಿದ್ದಾರೆ.
ಪಟ್ಟಣದಲ್ಲಿಇಂದು ಶಾಸಕ ಸತೀಶ್ ಜಾರಕಿಹೊಳಿ ರಾಜಕೀಯ ಹಿರಿಯ ನಾಯಕ, ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಅವರ ಮನೆಗೆ ದಿಢೀರ ಭೇಟಿ ನೀಡಿ, ಕಾಂಗ್ರೆಸ್ ಪಕ್ಷ ಸೇರಲು ಆಹ್ವಾನ ನೀಡಿದ್ದಾರೆ. ಅವರೊಂದಿಗೆ ಮಹಾಂತೇಶ ತಾವಂಶಿ, ರಾಜು ಮುನ್ನೋಳಿ, ಶಂಕರ ಗಿಡ್ಡನವರ ಅವರಿಗೂ ಸಹ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನ ಮಾಡಿದ್ದಾರೆ. ಇದೇ ವೇಳೆ ಶಾಸಕರು ಮಾತನಾಡಿ, ' ಕಾಂಗ್ರೆಸ್ ಪಕ್ಷ ಸಿದ್ದಾಂತಗಳನ್ನು ಒಪ್ಪಿ ಬರಲಿದ್ದಾರೋ ಅವರಿಗೆ ಆಹ್ವಾನ ನೀಡಲಾಗುತ್ತಿದೆ.
ಪಕ್ಷಕ್ಕೆ ಬರುವುದು, ಬಿಡುವುದು ಅವರಿಗೆ ಬಿಟ್ಟಿರುವ ವಿಚಾರ. ಈಗ ಬಹಳಷ್ಟು ಮುಖಂಡರನ್ನು ಕಾಂಗ್ರೆಸ್ ಸೇರಲು ಆಹ್ವಾನ ಮಾಡಲಾಗುತ್ತಿದೆ. ಮುಖಂಡರು ಸಮಯ ಕೇಳಿದ್ದಾರೆ. ಅವರ ತೀರ್ಮಾನ ಬಳಿಕ ಮುಂದಿನ ಹೆಜ್ಜೆ ಇಡಲಾಗುತ್ತದೆ' ಎಂದರು.
ಅಶೋಕ ಪೂಜಾರಿ ಅವರು, ಈ ಹಿಂದೆ ಬಿಜೆಪಿ ಪಕ್ಷದಲ್ಲಿ ಇದ್ದರು. ಗೋಕಾಕ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದೆ ಇರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಜೆಡಿಎಸ್ ಪಕ್ಷ ಸೇರ್ಪಡೆಗೊಂಡು, ಅದೇ ಪಕ್ಷದಿಂದ ಉಪಚುನಾವಣೆಗೆ ಸ್ಪರ್ಧೆ ಮಾಡಿದ್ದರು.