ಕಾನೂನುಗಳಲ್ಲಿ ಇರುವ ಅಸ್ಪಷ್ಟತೆ ನಿವಾರಣೆ ಆಗಬೇಕು- ಬಸವರಾಜ ಬೊಮ್ಮಾಯಿ

  • 15 Jan 2024 , 2:59 AM
  • Bengaluru
  • 97

ಬೆಂಗಳೂರು: ನ್ಯಾಯಾಲಯಗಳಲ್ಲಿ ವಿವಿಧ ಇಲಾಖೆಗಳ ನಡುವೆ ಸಾವಿರಾರು ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಕಾರಣವಾಗಿರುವ ಕಾನೂನುಗಳಲ್ಲಿನ ಅಸ್ಪಷ್ಟತೆಯನ್ನು ಸರಿಪಡಿಸಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಶನಿವಾರ ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ರಾಜ್ಯ ವಿವಾದ ಪರಿಹಾರ ನೀತಿ ಬಿಡುಗಡೆ ಸಮಾರಂಭದಲ್ಲಿ ಕಾಫಿ ಟೇಬಲ್ ಪುಸ್ತಕ ದಿ ಲೀಡರ್ ಆಫ್ ದಿ ಬಾರ್ ಎಂಬ ಹೊತ್ತಿಗೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ವಿವಿಧ ಇಲಾಖೆಗಳ ನಡುವೆ ಸಾವಿರಾರು ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ಕಾನೂನುಗಳಲ್ಲಿ ಇರುವ ಅಸ್ಪಷ್ಟತೆಯಿಂದಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ಹೀಗಾಗಿ ಕಾನೂನಿನಲ್ಲಿ‌ ಇರುವ ಅಸ್ಪಷ್ಟತೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ನ್ಯಾಯಾಲಯಗಳಲ್ಲಿ ಸರ್ಕಾರದ ಕೇಸ್ ಗಳ ಸಂಖ್ಯೆ ಹೆಚ್ಚಿದೆ. ಕಾನೂನಿನಲ್ಲಿಯೇ ಕೆಲ ನ್ಯೂನತೆಗಳಿವೆ. ಆ ನ್ಯೂನತೆಗಳನ್ನು ಸರಿಪಡಿಸಬೇಕಾಗಿದೆ. ಅದಕ್ಕಾಗಿಯೇ ಈ ವಿವಾದ ನಿರ್ಣಯ ನೀತಿಯನ್ನು ಜಾರಿಗೆ ತರಲಾಗಿದೆ. ಈ ನೀತಿಗೆ ಒಪ್ಪಿಗೆ ನೀಡಿರುವ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಇಲಾಖೆಗಳ ಮುಖ್ಯಸ್ಥರು ಮತ್ತು ಅಡ್ವೋಕೇಟ್ ಜನರಲ್ ನಡುವೆ ಸಮನ್ವಯ ಇರಬೇಕೆಂಬುದು ನನ್ನ ಭಾವನೆ. ಕಾನೂನು ರಚನೆ ಮಾಡುವುದು ಹೈ ಪ್ರೊಫೈಲ್ ಜಾಬ್ . ಕಾನೂನು ರಚನೆ ಮಾಡುವಾಗ ಒಂದು ಅಲ್ಪ ವಿರಾಮ, ಪೂರ್ಣ ವಿರಾಮ ಕೂಡ ಹಲವಾರು ಅರ್ಥಗಳನ್ನು ನೀಡುತ್ತದೆ. ಇದರಿಂದ ಕಾನೂನು ಸರಳವಾಗಬೇಕು. ಅದು ಬಿಟ್ಟು ತೊಡಕು ಆಗಬಾದರು. ಈ ರೀತಿಯ ಸಮಸ್ಯೆ ನಿವಾರಣೆ ಆಗಬೇಕಾಗಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಯಾವ ರಾಜ್ಯದಲ್ಲಿ ಶಾಂತಿ ನೆಲೆಸಿರುತ್ತದೆಯೋ ಆ ರಾಜ್ಯ ಸದೃಢವಾಗಿರುತ್ತದೆ. ಕಾನೂನು ಮತ್ತು ನ್ಯಾಯಾಂಗದಲ್ಲಿಯೂ ಕರ್ನಾಟಕ ಪ್ರಗತಿಪರವಾಗಿದೆ . ಕಾಫಿ ಟೇಬಲ್ ಬುಕ್ ಅದ್ಭುತವಾಗಿದೆ ಎಂದು ಬಸವರಾಜ ಬೊಮ್ಮಾಯಿ ಮೆಚ್ವುಗೆ ವ್ಯಕ್ತ ಪಡಿಸಿದರು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ,ಲೊಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ, ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಎಸ್ ಆರ್ ಬನ್ನೂರಮಠ, ಅಡ್ವೋಕೆಟ್ ಜನರಲ್ ಪ್ರಭುಲಿಂಗ ನಾವದಗಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read All News