ಬೆಳಗಾವಿ :ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಯಾದರೆ ಆ ಪ್ರದೇಶ ತನ್ನಿಂದ ತಾನೆ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತದೆ. ಹಾಗಾಗಿ ಶೈಕ್ಷಣಿಕ ಮೂಲಸೌಕರ್ಯಗಳ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ ಎಂದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಕ್ಷೇತ್ರದ ಕಂಗ್ರಾಳಿ ಬಿ ಕೆ ಗ್ರಾಮದ ಸರ್ಕಾರಿ ಹಿರಿಯ ಮರಾಠಿ ಪ್ರಾಥಮಿಕ ಶಾಲೆಗೆ ಹೆಚ್ಚುವರಿಯಾಗಿ 6 ನೂತನ ಕೊಠಡಿಗಳ ನಿರ್ಮಾಣದ ಕಾಮಗಾರಿಗಳಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಬೆಳಗಾವಿ ಗ್ರಾಮೀಣ ಕ್ಷೇತ್ರ ಹಿಂದುಳಿಯಲು ಇಲ್ಲಿ ಶೈಕ್ಷಣಿಕ ಸೌಲಭ್ಯಗಳ ಕೊರತೆಯೂ ಕಾರಣವಾಗಿದೆ.
ಬಡಜನರೇ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಮಕ್ಕಳನ್ನು ದೂರದ ಊರಿಗೆ ಕಳಿಸಿ ಶಿಕ್ಷಣ ಕೊಡಿಸುವುದು ಕಷ್ಟ. ಹಾಗಾಗಿ ಉನ್ನತ ಶಿಕ್ಷಣದಿಂದ ಬಹಳಷ್ಟು ಜನರು, ಅದರಲ್ಲೂ ಹೆಣ್ಣು ಮಕ್ಕಳು ದೂರವೇ ಉಳಿಯುತ್ತಿದ್ದಾರೆ. ಹಾಗಾಗಿ ಕ್ಷೇತ್ರದಲ್ಲಿ ಶೈಕ್ಷಣಿಕ ವಾತಾವರಣ ಸುಧಾರಣೆಗೆ ಆದ್ಯತೆ ನೀಡುತ್ತಿದ್ದೇನೆ. ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡದಿರೋಣ ಎಂದು ಅವರು ಕಳಕಳಿಯಿಂದ ವಿನಂತಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ದತ್ತಾ ಪಾಟೀಲ, ಜಯರಾಮ ಪಾಟೀಲ, ನಾತಾಜಿ ಪಾಟೀಲ, ರೇಖಾ ಇಂಡಿಕರ್, ಸಿದ್ದರಾಯಿ ಬೆಳಗಾವಿ, ಅಡಿವೆಪ್ಪ ಹತ್ತರಗಿ, ಅರ್ಚನಾ ಪಠಾಣಿ, ಬಂಡೆನವಾಜ್ ಸೈಯದ್, ಉಮೇಶ ಪಾಟೀಲ, ಶಾಲಾ ಸಿಬ್ಬಂದಿ ವರ್ಗದವರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.