ಬೆಳಗಾವಿ: ಲೋಕಸಭಾ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರ ಬೆಂಬಲಕ್ಕೆ ಯುವಪಡೆ ಧಾವಿಸುತ್ತಿದೆ. ಸತೀಶ ಜಾರಕಿಹೊಳಿ ಅವರನ್ನು ಇಲ್ಲಿನ ಜಾಧವ್ ನಗರದ ಅವರ ನಿವಾಸದಲ್ಲಿ ಬೆಳಗಾವಿ ನಗರದ ನೂರಾರು ಯುವಕ, ಯುವತಿಯರು ಇಂದು ಸ್ವಯಂಪ್ರೇರಿತರಾಗಿ ಭೇಟಿ ನೀಡಿ, ಚುನಾವಣೆಗೆ ಬೆಂಬಲ ವ್ಯಕ್ತಪಡಿಸಿದರು.
"ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದನ್ನು ಹಾಗೂ ತಮ್ಮ ಸಾಮಾಜಿಕ ಚಟುವಟಿಕೆಗಳನ್ನು ಮೆಚ್ಚಿ ಲೋಕಸಭಾ ಚುನಾವಣೆಯಲ್ಲಿ ನಾವು ಸ್ವಯಂಪ್ರೇರಿತರಾಗಿ ನಿಮ್ಮನ್ನು ಬೆಂಬಲಿಸುತ್ತಿದ್ದೇವೆ.
ನಿಮ್ಮ ಪರವಾಗಿ ನಾವು ಪ್ರಚಾರವನ್ನು ನಡೆಸಲಿದ್ದೇವೆ" ಎಂದು ಯುವಕರು ತಿಳಿಸಿದರು. ಈ ಸಂದರ್ಭದಲ್ಲಿ ಯುವಕರನ್ನುದ್ದೇಶಿಸಿ ಮಾತನಾಡಿದ ಸತೀಶ ಜಾರಕಿಹೊಳಿ, "ರಾಜ್ಯ ಹಾಗೂ ಕೇಂದ್ರ ಸರ್ಕಾರದ ಧೋರಣೆಗಳು ಹಾಗೂ ದೇಶದ ಇಂದಿನ ಸ್ಥಿತಿಯನ್ನು ಯುವಕರು ಅರ್ಥಮಾಡಿಕೊಳ್ಳಬೇಕು.
ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ ವಿರುದ್ಧ ಯುವಕರು ಸಂಘಟಿತರಾಗಬೇಕು. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ವ್ಯವಸ್ಥೆಯ ಬದಲಾವಣೆಗೆ ಕೈಜೋಡಿಸಬೇಕು" ಎಂದು ಮನವಿ ಮಾಡಿದರು.