ಲಾಕ್ ಡೌನ್ ನಿಂದ ಯಾವುದೇ ಪ್ರಯೋಜನ ಇಲ್ಲ: ಶಾಸಕ ಸತೀಶ

  • 30 Dec 2023 , 12:02 PM
  • Belagavi
  • 116

ಬೆಳಗಾವಿ :ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕು ಜನ ಮಂತ್ರಿಗಳಿದ್ದರೂ ಏನು ಪ್ರಯೋಜನ. ಇಲ್ಲಿಯವರೆಗೂ ಒಂದು ಸಭೆಯನ್ನು ಕೂಡಾ ಮಾಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಉಸ್ತುವಾರಿ ಮಂತ್ರಿಗಳೇ ಬೇಕು ಅಂತಿಲ್ಲ. ಜಿಲ್ಲೆಯ ನಾಲ್ವರು ಸಚಿವರು ಇದ್ದಾರೆ. ಅವರ ಮೇಲೆ ಜವಾಬ್ದಾರಿ ಇದೆ. ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲವೆಂದು ಕೈ ಚಲ್ಲಿ ಕುಳಿತುಕೊಳ್ಳದೇ ಜಿಲ್ಲೆಯ ಬಗ್ಗೆ ಕಾಳಜಿ ವಹಿಸಬೇಕು.

ಒಮ್ಮತದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಸರ್ಕಾರ ಏನು ಸಾಧನೆ ಮಾಡಲು ಹೊರಟ್ಟಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ.

ನೈಟ್ ಕರ್ಫ್ಯೂದಿಂದ ಕೋವಿಡ್ ನಿಯಂತ್ರಣವಾಗುವುದು ಕಷ್ಟ ಸಾಧ್ಯ. 144 ಸೆಕ್ಷನ್ ಜಾರಿ ಮಾಡಿ, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸಲಹೆ ನೀಡಿದರು. ಲಾಕ್ ಡೌನ್ ಜಾರಿಗೊಳಿಸಬಾರದು, ಲಾಕ್ ಡೌನ್ ದಿಂದ ಕಾರ್ಖಾನೆಗಳು ಎಲ್ಲವೂ ಬಂದ್ ಆಗಲಿವೆ.

ಇದರಿಂದ ಯುವಕರು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಳ್ಳುತ್ತಾರೆ. ಈಗಾಗಲೇ ಕಳೆದ ವರ್ಷದ ಲಾಕ್ ಡೌನ್ ದಿಂದ ಚೇತರಿಸಿಕೊಂಡಿಲ್ಲ. ಮತ್ತೆ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡರೆ ಜನ ಸಾಮಾನ್ಯರು ಬದುಕು ನಡೆಸುವುದು ಕಷ್ಟವಾಗಲಿದೆ ಎಂದರು.

ಬೆಳಗಾವಿ ಲೋಕಸಭಾ ಉಪಚುನಾವಣೆ ಮತದಾನ ಮುಗಿದಿದೆ. ಎರಡು ಪಕ್ಷದವರು, ಕಾರ್ಯಕರ್ತರು ಎಲ್ಲರೂ ಲೆಕ್ಕಾಚಾರ ಮಾಡುತ್ತಿದ್ದಾರೆ. ಅಧಿಕಾರಿಗಳು, ಕಾರ್ಯಕರ್ತರು ಚುನಾವಣೆ ವೇಳೆ ಒಳ್ಳೆಯ ರೀತಿ ಕೆಲಸ ಮಾಡಿದ್ದಾರೆ. 20 ವರ್ಷ ಬಳಿಕ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರರಷ್ಟು ಗೆದ್ದೆ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಮತದಾನ ಕಡಿಮೆಯಾಗಿರುವುದು ಯಾರಿಗೆ ಲಾಭ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದು ಯಾರಿಗೆ ಲಾಭ , ನಷ್ಟ ಅನ್ನುವುದಕ್ಕೆ ಆಗುವುದಿಲ್ಲ. ಹೆಚ್ಚಾಗಿದ್ದರೆ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುತ್ತಿದ್ದೇವು. ಕಡಿಮೆ ಆಗಿದೆ ಕಡಿಮೆ ಮತಗಳ ಅಂತರದಲ್ಲಿ ಕಾಂಗ್ರೆಸ್ ಪಕ್ಷವೇ ಗೆಲ್ಲುತ್ತದೆ. ಆದರೂ ಸಹ ಮೇ.2ರವರೆಗೂ ಸಹ ಕಾಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಳಗಾವಿ ನಗರ ಘಟಕದ ಕಾಂಗ್ರೆಸ್ ಅಧ್ಯಕ್ಷ ರಾಜು ಸೇಠ್, ಜಿಪಂ.ಉಪಾಧ್ಯಕ್ಷ ಅರುಣ ಕಟಾಂಬಳೆ, ಸುನೀಲ್ ಹನಮನ್ನವರ ಸೇರಿದಂತೆ ಇತರರು ಇದ್ದರು.

Read All News