ಬೆಳಗಾವಿ:ಕರ್ನಾಟಕ ಲೋಕಸೇವಾ ಆಯೋಗವು ಏ.22ರಿಂದ ಏ.30 ರವರೆಗೆ ನಡೆಯಬೇಕಿದ್ದ 2020 ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಮುಂದೂಡಿದೆ ಎಂದು ಆಯೋಗದ ಕಾರ್ಯದರ್ಶಿಗಳಾದ ಜಿ.ಸತ್ಯವತಿ ಅವರು ತಿಳಿಸಿದ್ದಾರೆ.
ಈ ಪರೀಕ್ಷೆಗಳಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಅಭ್ಯರ್ಥಿಗಳು ಏ.22 ರಿಂದ ಏ.28 ರವರೆಗೆ ಬೆಂಗಳೂರು ಪರೀಕ್ಷಾ ಕೇಂದ್ರಕ್ಕೆ ಹಾಗೂ ಏ.29 ಮತ್ತು ಏ.30 ರ ವಿಭಾಗೀಯ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾಗಬೇಕಾಗಿತ್ತು.
ಕೋವಿಡ್-19 ಸಾಂಕ್ರಾಮಿಕ ರೋಗಾಣು ಹರಡುವಿಕೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವುದರಿಂದ ಹಾಗೂ ಏ.20 ರಂದು ಸರ್ಕಾರ ಹೊರಡಿಸಿದ ಆದೇಶ ಸಂ.ಆರ್ಡಿ 158 ಟಿಎನ್ಆರ್ 2020 ಮಾರ್ಗಸೂಚಿ ಅನ್ವಯ ಏ.21ರಿಂದ ಮೇ.04 ರವರೆಗೆ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿರುವ ಹಿನ್ನಲೆಯಲ್ಲಿ ಇಲಾಖಾ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಮುಂದಿನ ಪರೀಕ್ಷಾ ದಿನಾಂಕಗಳನ್ನು ನಂತರದ ದಿನಗಳಲ್ಲಿ ಆಯೋಗದ ಅಂತರ್ಜಾಲ https://kpsc.kar.nic.in ನಲ್ಲಿ ಪ್ರಕಟಿಸಲಾಗುವುದು ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗಳಾದ ಜಿ.ಸತ್ಯವತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.