ತುರ್ತು ಆಕ್ಸಿಜನ್ ಪೂರೈಕೆಗೆ ಕ್ರಮ: ಜಿಲ್ಲಾಧಿಕಾರಿ ಹಿರೇಮಠ

  • 15 Jan 2024 , 2:52 AM
  • Belagavi
  • 164

ಬೆಳಗಾವಿ : ಕೋವಿಡ್ ಸೋಂಕಿತರ ತುರ್ತು ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್ ತಕ್ಷಣವೇ ಆಯಾ ಆಸ್ಪತ್ರೆಗಳಿಗೆ ಒದಗಿಸಲು ಬೆಳಗಾವಿ ನಗರದಲ್ಲಿ ಮೊಬೈಲ್ ಸಿಲಿಂಡರ್ ಬ್ಯಾಂಕ್ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಭಾರತೀಯ ವೈದ್ಯಕೀಯ ಮಂಡಳಿ (ಐ.ಎಂ.ಎ.)ಯ ಪ್ರತಿನಿಧಿಗಳ ಜತೆ ನಡೆಸಲಾದ ಚರ್ಚೆಯಂತೆ ಮೊಬೈಲ್ ಸಿಲಿಂಡರ್ ಬ್ಯಾಂಕ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿರುವ ಕೋವಿಡ್ ಸೋಂಕಿತರ ತುರ್ತು ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್ ಸಿಲಿಂಡರ್ ಗಳನ್ನು ಜಿಲ್ಲಾಡಳಿತವು ಒದಗಿಸಲಿದೆ. ಇದಕ್ಕೆ ಅಗತ್ಯವಿರುವ ವಾಹನ ವ್ಯವಸ್ಥೆಯನ್ನು ಐ.ಎಂ.ಎ. ಮಾಡಿಕೊಳ್ಳಲಿದೆ.

ಜಿಲ್ಲಾಡಳಿತ ಐವತ್ತು ಆಕ್ಸಿಜನ್ ಸಿಲಿಂಡರ್ ಗಳನ್ನು ಒದಗಿಸಲಿದ್ದು, ಖಾಸಗಿ ಆಸ್ಪತ್ರೆಗಳ ಬೇಡಿಕೆ ಆಧರಿಸಿ ತಕ್ಷಣವೇ ಆಕ್ಸಿಜನ್ ಪೂರೈಕೆ ಮಾಡಲಾಗುತ್ತದೆ. ಇದರಿಂದ ರೋಗಿಗಳ ಪ್ರಾಣ ಉಳಿಸಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದ್ದಾರೆ. ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಗಳಿಗೆ ಅನುಕೂಲವಾಗುವಂತೆ ಈ ಸೇವೆಯನ್ನು ಆರಂಭಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಈ ವ್ಯವಸ್ಥೆಯನ್ನು ಖಾಸಗಿ ಆಸ್ಪತ್ರೆಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇದು ಪರಿಣಾಮಕಾರಿಯಾಗಿ ಕಂಡುಬಂದಲ್ಲಿ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಆಕ್ಸಿಜನ್ ಸಿಲಿಂಡರ್ ಗಳನ್ನು ಜಿಲ್ಲಾಡಳಿತ ಒದಗಿಸಲಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದ್ದಾರೆ

Read All News