ಕುವೈತ್ ರಾಷ್ಟ್ರದಿಂದ 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ; ಸಮರ್ಪಕ ವಿತರಣೆಗೆ ಜಿಲ್ಲಾಡಳಿತ ಸಿದ್ದ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

  • 14 Jan 2024 , 9:43 PM
  • Dharwad
  • 133

ಧಾರವಾಡ : ಭಾರತ ಸರ್ಕಾರದ ವಿದೇಶಾಂಗ ಮಂತ್ರಾಲಯ ಮತ್ತು ವಾಣಿಜ್ಯ ಮಂತ್ರಾಲಯದಿಂದ ಬೇರೆ ಬೇರೆ ರಾಷ್ಟ್ರಗಳ ಜೊತೆ ಭಾರತದ ಉತ್ತಮ ಸಂಬಂಧ ಹೊಂದಿರುವದರಿಂದ ಮತ್ತು ಜಾಗತೀಕ ಟೆಂಡರ ಮೂಲಕ ಆಕ್ಸಿಜನ್ ಆಮದು ಮಾಡಿಕೊಳ್ಳುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಲ್ಹಾದ ಜೋಶಿ ಹೇಳಿದರು.

ಸೋಮವಾರ ಬೆಳಿಗ್ಗೆ, ಜಿಲ್ಲೆಯ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಪ್ರಾಕ್ಸಿಯರ್ (praxair) ಆಕ್ಸಿಜನ್ ಮರುಪೂರ್ಣ (ರೀಪಿಲ್ಲಿಂಗ್) ಘಟಕ್ಕೆ ಭೇಟಿ ನೀಡಿ, ಘಟಕದಿಂದ ಟ್ಯಾಂಕರ್ ಗೆ ಆಕ್ಸಿಜನ್ ತುಂಬುವ ಕಾರ್ಯ ಪರೀಶಿಲಿಸಿದ ನಂತರ ಮಾತನಾಡಿದರು.

ಕುವೈತ್ ರಾಷ್ಟ್ರದಿಂದ 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆಗೆ ಒಪ್ಪಂದವಾಗಿತ್ತು. ಅದನ್ನು ಧಾರವಾಡದಲ್ಲಿ ಸಂಗ್ರಹಿಸಿ, ಧಾರವಾಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಇಲ್ಲಿಂದ ವ್ಯವಸ್ಥಿತವಾಗಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಅದರಂತೆ ಈಗಾಲೇ 50 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿದೆ. ಈ ಆಕ್ಸಿಜನ್ ನನ್ನು ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟ , ವಿಜಯಪುರ ಜಿಲ್ಲೆಗಳಿಗೆ ಸಮರ್ಪಕವಾಗಿ ಹಂಚಿಕೆ ಮಾಡಲು ಜಿಲ್ಲಾಡಳಿತ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿದೆ . ಇನ್ನೂಳಿದ 25 ಮೆಟ್ರಿಕ್ ಟನ್ ಆಕ್ಸಿಜನ್ ಎರಡು ದಿನಗಳಲ್ಲಿ ಪೂರೈಕೆಯಾಗಲಿದೆ.

ಕುವೈತ್ ರಾಷ್ಟ್ರದಿಂದ ಬಂದಿರುವ ಆಕ್ಸಿಜನ್ ವಿಶೇಷವಾಗಿ ಈ ಭಾಗಕ್ಕೆ ಕಳುಹಿಸಲು ಸಹಕರಿಸಿದ ಭಾರತ ಸರ್ಕಾರದ ಪ್ರಧಾನ ಮಂತ್ರಿ, ವಿದೇಶಾಂಗ ಹಾಗೂ ವಾಣಿಜ್ಯ ಮಂತ್ರಿಗಳಿಗೆ ಸಚಿವರು ಧನ್ಯವಾದ ಹೇಳಿದರು.

ಪೂರ್ವಾಂಚಲದಿಂದ ಹೆಚ್ಚುವರಿಯಾಗಿ 2 ಟ್ಯಾಂಕರ್ ಆಕ್ಸಿಜನ್ ಬಂದಿದ್ದು, ಓರಿಸ್ಸಾದಿಂದ ಒಂದು ಆಕ್ಸಿಜನ್ ಟ್ಯಾಂಕರ್ ಬರಲಿದೆ. ಇವೆಲ್ಲವೂಗಳನ್ನು ಒಟ್ಟುಗೂಡಿಸಿ, ಜಿಲ್ಲೆಗೆ ದಿನನಿತ್ಯ ಬೇಕಾಗುವ ಆಕ್ಸಿಜನ್‍ನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಈ ಎಲ್ಲ ವ್ಯವಸ್ಥೆಯ ಮಧ್ಯೆಯೂ ಸಾರ್ವಜನಿಕರು ಜಾಗೃತರಾಗಿದ್ದು, ಕೋವಿಡ್ ಸಾಂಕ್ರಾಮಿಕ ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ವೈದ್ಯರಿಂದ ಸೂಕ್ತ ಸಲಹೆ, ಚಿಕಿತ್ಸೆ ಪಡೆಯಬೇಕು. ಕೋವಿಡ್ -19ರ ಬಗ್ಗೆ ಭಯ ಪಡದೆ ಎಚ್ಚರವಹಿಸಿ. ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕೆಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಆಕ್ಸಿಜನ್ ತಂಡದ ನೊಡಲ್ ಅಧಿಕಾರಿಗಳಾದ ಆಹಾರ ಇಲಾಖೆ ಜಂಟಿ ನಿರ್ದೇಶಕ ವಿನಾಯಕ ಪಾಲನಕರ, ಡಿಯುಡಿಸಿ ಯೋಜನಾ ನಿರ್ದೇಶಕ ರುದ್ರೇಶ, ಜಿಲ್ಲಾ ಸಹಾಯಕ ಔಷಧಿಗಳ ನಿಯಂತ್ರಕ ಮಲ್ಲಿಕಾರ್ಜುನ ಕೆ.ಎಸ್, ಡಿವೈಎಸ್ ಪಿ ಮಲ್ಲಿಕಾರ್ಜುನ ಬಿ.ಸಂಕದ, ಇತರು ಅಧಿಕಾರಿಗಳು ಉಪಸ್ಥಿತರಿದ್ದರು.

Read All News