ಬೆಂಗಳೂರು :ಅಪಘಾತದಲ್ಲಿ ಜೀವ ಕಳೆದುಕೊಂಡ ಪ್ರತಿಭಾವಂತ ನಟ ಸಂಚಾರಿ ವಿಜಯ್ ನೆನಪು ಸುಲಭಕ್ಕೆ ಮಾಸುವುದಲ್ಲ. ಅವರ ಗೆಳೆಯರಿಗಂತೂ ವಿಜಯ್ ಅಗಲಿಕೆ ಯಾವತ್ತೂ ಕಾಡುವ ಕಹಿ ನೆನಪು. ಸಿನಿಮಾರಗದಲ್ಲಿ, ಕನ್ನಡ ರಂಗಭೂಮಿಯಲ್ಲಿ ನೂರಾರು ಗೆಳೆಯರನ್ನು ಹೊಂದಿದ್ದರು ಸಂಚಾರಿ ವಿಜಯ್.ಕೆಲವರಿಗಂತೂ ವಿಜಯ್ ಜೀವದ ಗೆಳೆಯರೇ ಆಗಿದ್ದರು. ಅಂಥಹವರಲ್ಲಿ ಒಬ್ಬರು ನಟ ನೀನಾಸಂ ಸತೀಶ್.ನಟ ನೀನಾಸಂ ಸತೀಶ್ ಹಾಗೂ ಸಂಚಾರಿ ವಿಜಯ್ ಆಪ್ತ ಗೆಳೆಯರು. ಅಪಘಾತಕ್ಕೀಡಾಗಿ ವಿಜಯ್ ಆಸ್ಪತ್ರೆಗೆ ದಾಖಲಾಗಿದ್ದಾಗ ಸತೀಶ್ ಅಲ್ಲಿಯೇ ಇದ್ದರು. ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ ಕಣ್ಣೀರು ಸುರಿಸಿದ್ದರು. ಇದೀಗ ಜೂನ್ 20ಕ್ಕೆ ನೀನಾಸಂ ಸತೀಶ್ ಅವರ ಹುಟ್ಟುಹಬ್ಬ. ಆದರೆ ಗೆಳೆಯನ ಅಗಲಿಕೆಯ ನೋವು ಎದೆಯಲ್ಲಿರುವಾಗ ಸಂಭ್ರಮ ಪಡುವುದು ಅಸಾಧ್ಯ. ಹಾಗಾಗಿ ಹುಟ್ಟುಹಬ್ಬ ಸಂಭ್ರಮವನ್ನು ರದ್ದು ಮಾಡಿದ್ದಾರೆ ಸತೀಶ್.
''ಗೆಳೆಯರೇ ಇದೇ 20 ನನ್ನ ಹುಟ್ಟು ಹಬ್ಬ ,ವಿಜಿ ಇಲ್ಲದ ಈ ಸಂದರ್ಭದಲ್ಲಿ ತುಂಬ ನೋವಿನಲ್ಲಿ ನನ್ನ ಗೆಳೆಯರ ಬಳಗವಿದೆ.ಹಾಗಾಗಿ ಆ ದಿನ ಯಾವುದೇ ಸಂಭ್ರಮಗಳಿರಿವುದಿಲ್ಲ. ಬಿಡುಗಡೆಯಾಗಬೇಕಿದ್ದ ಪೆಟ್ರೋಮ್ಯಾಕ್ಸ್ ಟೀಸರ್ ಕೂಡ ಮುಂದೂಡಿದ್ದೇವೆ'' ಎಂದು ಫೇಸ್ಬುಕ್ನಲ್ಲಿ ಸಂದೇಶ ಪ್ರಕಟಿಸಿದ್ದಾರೆ ಸತೀಶ್.ಸತೀಶ್ ಹಾಗೂ ಸಂಚಾರಿ ವಿಜಯ್ ಒಟ್ಟಿಗೆ ಸೇರಿ ಇನ್ನೂ ಕೆಲವರನ್ನು ಜೊತೆ ಮಾಡಿಕೊಂಡು ಲಾಕ್ಡೌನ್ ಸಮಯದಲ್ಲಿ ಜನರಿಗೆ ಸಹಾಯ ಮಾಡುವ ಕಾರ್ಯಕ್ಕಿಳಿದಿದ್ದರು.
ವಿಜಯ್ ಅಪಘಾತಕ್ಕೆ ಈಡಾಗುವ ಹಿಂದಿನ ದಿನವೂ ಸಹ ಸತೀಶ್ ಜೊತೆ ಸೇರಿ ದಿನಸಿ ವಿತರಣೆ ಮಾಡಿದ್ದರು. ಸಂಚಾರಿ ವಿಜಯ್ರು ದಿನಸಿ ಕಿಟ್ಗಳನ್ನು ತಯಾರು ಮಾಡುತ್ತಿರುವ ವಿಡಿಯೋವನ್ನು ಸತೀಶ್ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದರು. ವಿಜಯ್ ಸಹ ಸತೀಶ್ ಜೊತೆಗೆ ದಿನಸಿ ವಿತರಣೆ ಮಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದರು. ಆದರೆ ವಿಧಿ ಈ ಇಬ್ಬರು ಗೆಳೆಯರನ್ನು ಬೇರೆ ಮಾಡಿಬಿಟ್ಟಿತು. ಸಂಚಾರಿ ವಿಜಯ್ ಜೂನ್ 12 ರಂದು ಜೆಪಿ ನಗರ 7ನೇ ಹಂತದ ಬಳಿ ಅಪಘಾತಕ್ಕೆ ಈಡಾದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಕಾರಣ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ವೈದ್ಯರು ಕೈಚೆಲ್ಲಿದರು. ಮೆದುಳು ನಿಷ್ಕ್ರಿಯಗೊಂಡಿದ್ದ ವಿಜಯ್ರನ್ನು ಜೂನ್ 15ರಂದು ನಿಧನ ಎಂದು ಘೋಷಿಸಲಾಯಿತು.