ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಸಿಎಂ ಬದಲಾವಣೆಯ ಗೊಂದಲಗಳಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಂಪೂರ್ಣ ತೆರೆ ಎಳೆದು, ಹೈಕಮಾಂಡಗೆ ಯಡಿಯೂಪ್ಪನವರೇ ಬಿಜೆಪಿ ಪಾಲಿಗೆ ಮಾಸ್ ಲೀಡರ್ ಎಂಬ ಸಂದೇಶವನ್ನು ಹೊತ್ತುಕೊಂಡು ಹೈಕಮಾಂಡಗೆ ವರದಿ ಸಲ್ಲಿಸಲಿದ್ದಾರೆ.
ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಪತನಗೊಂಡು ಬಿಜೆಪಿ ಸರಕಾರ ರಚನೆಯಾದಗಿನಿಂದಲೂ ಸಚಿವ ಸ್ಥಾನ ಸಿಗದ ಕೆಲ ಶಾಸಕರು ಸಿಎಂ ಯಡಿಯೂರಪ್ಪ ಇಂದು ಬದಲಾವಣೆಯಾಗ್ತಾರೆ, ನಾಳೆ ಬದಲಾವಣೆಯಾಗುತ್ತಾರೆ ಎಂದು ಹಾದಿ ಬೀದಿಯಲ್ಲಿ ಹೇಳಿಕೆ ನೀಡಿ ಪಕ್ಷಕ್ಕೆ ಹಾಗೂ ವಿಪಕ್ಷಗಳಿಗೆ ಈ ವಿಷಯವನ್ನು ಹಾಟ್ ಮಾಡಿದ್ದರು. ಆದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದ ವಿಪಕ್ಷಗಳು ಸಹ ಪರೋಕ್ಷವಾಗಿ ಯಡಿಯೂರಪ್ಪನವರ ಪರ ಬ್ಯಾಟ್ ಬಿಸಿದರು.
ಇದರ ಪರಿಣಾಮವಾಗಿ ಹುಬ್ಬಳ್ಳಿ- ಧಾರವಾಡ ಪಶ್ಚಿಮ ಮತಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಸಿಎಂ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಪದೇ ಪದೇ ದೆಹಲಿಗೆ ತೆರಳಿ ಹೈಕಮಾಂಡ್ ಗೆ ಒತ್ತಾಯ ಹಾಕುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಅರವಿಂದ ಬೆಲ್ಲದ ಧಾರವಾಡ ಜಿಲ್ಲೆಯಲ್ಲಿ ರಾಮ ಲಕ್ಷ್ಮಣರಂತೆ ಇರುವ ಮಾಜಿ ಸಿಎಂ, ಸಚಿವ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೂ ಮೀರಿ ಸಿಎಂ ಸ್ಥಾನಕ್ಕೆ ಟವಲ್ ಹಾಕಿದ್ದು ಮುಂದೆ ಅವರ ರಾಜಕೀಯ ಜೀವನದಲ್ಲಿ ಮುಳ್ಳಾಗುವ ಲಕ್ಷಣವನ್ನು ಎಳೆದುಕೊಂಡರಾ ಎನ್ನುವ ಪ್ರಶ್ನೆ ಧಾರವಾಡದ ಜಿಲ್ಲೆಯ ರಾಜರಕಾರಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
ಇದರ ನಡುವೆ ರಾಜ್ಯಕ್ಕೆ ಮೂರು ದಿನಗಳ ಕಾಲ ವಾಸ್ತವ್ಯ ಹೂಡಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಎಲ್ಲ ಶಾಸಕ, ಸಚಿವರ ಅಭಿಪ್ರಾಯ ಸಂಗ್ರಹಿಸಿ ಯಡಿಯೂರಪ್ಪನೇ ಕರ್ನಾಟಕಕ್ಕೆ ಬಾಸ್ ಎನ್ನುವ ಸಂದೇಶವನ್ನು ಹೈಕಮಾಂಡ್ ಗೆ ಸಲ್ಲಿಸಲಿದ್ದಾರೆ ಎನ್ನುವ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಅಲ್ಲದೆ ಸಿಎಂ ಬದಲಾವಣೆ ಮಾಡಬೇಕೆಂದು ಪದೇ ಪದೇ ದೆಹಲಿಯತ್ತ ಮುಖ ಮಾಡುತ್ತಿರುವ ಅರವಿಂದ ಬೆಲ್ಲದ ಅವರಿಗೆ ರಾಜ್ಯದ ಜನರಲ್ಲಿ ಪರಿಚಿತರಿಲ್ಲ. ಸಿಎಂ ಬಿ.ಎಸ್.ಯಡಿಯೂರಪ್ಪನವರನ್ನು ವೀರಶೈವ ಲಿಂಗಾಯತರು ನಂಬಿದಷ್ಟು ಬೆಲ್ಲದ ಅವರನ್ನು ನಂಬಲ್ಲ. ವೀರಶೈವ ಲಿಂಗಾಯತ ಸಮಾಜಕ್ಕೆ ಬೆಲ್ಲದ ಕೊಡುಗೆ ಏನು ಎಂದು ವೀರಶೈವ ಲಿಂಗಾಯತ ಸಮುದಾಯ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಎಲ್ಲ ಊಹಾಪೋಹ. ಯಡಿಯೂರಪ್ಪ ನವರೇ ಮುಂದಿನ ಎರಡು ವರ್ಷದ ಸಿಎಂ. ಅವರ ನೇತೃತ್ವದಲ್ಲಿಯೇ 2023ರ ಚುನಾವಣೆ ನಡೆಯುವುದು ಶತಸಿದ್ದ ಎಂದು ಹೇಳಲಾಗುತ್ತಿದೆ.