ನವದೆಹಲಿ : ಭಾರತದ ಸಾರ್ವಭೌಮತೆ ವಿಷಯದಲ್ಲಿ ಕಿಂಚಿತ್ತೂ ರಾಜಿ ಪ್ರಶ್ನೆಯೇ ಇಲ್ಲ ಎನ್ನುವ ಸಂದೇಶವನ್ನು ಚೀನಾ ಸೇರಿದಂತೆ ಜಗತ್ತಿಗೆ ಸಾರಲು ಮತ್ತು ಗಡಿಯಲ್ಲಿ ನಮ್ಮ ಸೇನಾಪಡೆಗಳನ್ನು ಹುರಿದುಂಬಿಸಲು ಇಂದು ಸ್ವತಃ ಪ್ರಧಾನಿ ಲೇಹ್ ಬಳಿಯ ಮುಂಚೂಣಿ ಸೇನಾ ನೆಲೆಗಳಿಗೆ ಹಾಗೂ ಗಾಲ್ವಾನ್ ಕಣಿವೆಯ ಧೈರ್ಯಶಾಲಿಗಳನ್ನು ಭೇಟಿಯಾಗಿದ್ದಾರೆ.

ಲಡಾಖ್ ಪೂರ್ವ ಭಾಗದ ವಾಸ್ತವ ಗಡಿ ರೇಖೆಯಲ್ಲಿ ಭಾರತ - ಚೀನಾ ಗಡಿ ಬಿಕ್ಕಟ್ಟು ಸಂಘರ್ಷದ ಬೆನ್ನಲ್ಲೇ ಪ್ರಧಾನಿ ಮೋದಿ ಇವತ್ತು ಬೆಳಿಗ್ಗೆ ದಿಢೀರ್ ಅಂತ ಲಡಾಖ್ಗೆ ಭೇಟಿ ನೀಡಿದ್ದಾರೆ. ಭೂಸೇನೆ, ವಾಯುಸೇನೆ ಮತ್ತು ಐಟಿಬಿಪಿ ಯೋಧರ ಜೊತೆ ಮತ್ತು ಸೇನಾ ನಾಯಕರ ಜೊತೆ ಮಾತುಕತೆ ನಡೆಸಿ ಹಾಗೂ ಗಡಿಯಲ್ಲಿನ ಭದ್ರತೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಪ್ರಧಾನಿ ಮೋದಿಗೆ ಚೀಫ್ ಆಫ್ ಡಿಫೆನ್ಸ್ ಸ್ಟಾಫ್(CDS)ಬಿಪಿನ್ ರಾವತ್ ಮತ್ತು ಭೂಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಸಾಥ್ ನೀಡಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆ ವಿಶಾಲ ಪ್ರದೇಶದಲ್ಲಿ ಸೇರಿದ ಯೋಧರು ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲರಿಗೂ ಮಾದರಿಯಾದರು. ದಿಢೀರ್ ಬೆಳವಣಿಗೆಯಲ್ಲಿ ಪ್ರಧಾನಿ ಮೋದಿ ಸಹ ಲಡಾಖ್ ನ ಲೇಹ್ ಗೆ ಭೇಟಿ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ.