ಬೆಳಗಾವಿ :ಕೇಂದ್ರ ಹಾಗೂ ರಾಜ್ಯ ಬಿಜೆಪಿಯ ಧ್ವೇಷ ರಾಜಕಾರಣದ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ. ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರು ಬದಲಾವಣೆ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ಕಳೆದ ಏಳು ವರ್ಷದಲ್ಲಿ ಮೋದಿ ಸರ್ಕಾರ ಯಾವುದೇ ಯೋಜನೆ ಮಾಡಿಲ್ಲ.
ಅವರ ಸಾಧನೆ ಶೂನ್ಯವಾಗಿದೆ, ಆದ್ದರಿಂದಲೇ ನೇಮ ಚೆಂಜ್, ಪ್ಲೇಟ್ ಚೆಂಜ್ ಮಾಡುವ ಮೂಲಕ ಅದು ನನ್ನ ಸಾಧನೆ ಅಂತಾ ಪ್ರಧಾನಿಯವರು ಹೇಳುತ್ತಿದ್ದಾರೆ ಎಂದು ಖಾರವಾಗಿ ಉತ್ತರಿಸಿದರು. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ, ಕಾಂಗ್ರೆಸ್ ಯೋಜನೆಗಳ ಹೆಸರಗಳನ್ನು ಬದಲಾವಣೆ ಮಾಡುವುದರಿಂದ ಸಾಧನೆಯನ್ನು ಬಚ್ಚಿಡಲು ಸಾಧ್ಯವಿಲ್ಲ.
ರಾಜ್ಯದಲ್ಲಿ ಇಂದಿರಾ ಕ್ಯಾಂಟಿನ್ ಗೆ ಸಿದ್ದರಾಮಯ್ಯ ನೇತೃತ್ವದಲ್ಲಿನ ಕಾಂಗ್ರೆಸ್ ಸರ್ಕಾರ ಅನುದಾನ ನೀಡುತ್ತಿತ್ತು. ಆದರೆ ಈಗ ಹೆಚ್ಚಿನ ಪ್ರಚಾರವಾಗುತ್ತಿರುವುದರಿಂದ ಬಿಜೆಪಿ ಸರ್ಕಾರ ಅನುದಾನ ಕಡಿತಗೊಳಿಸಿದೆ ಎಂದರು.
ಬಿಜೆಪಿಸರ್ಕಾರಇನ್ನೂಭದ್ರವಾಗಿಲ್ಲ : ಪ್ರವಾಹ ಸೆಟ್ಲ್ ಆಯ್ತು ಆದರೆ ಸರ್ಕಾರವಿನ್ನೂ ಸೆಟ್ಲ್ ಆಗುತ್ತಿಲ್ಲ. ಸಿಎಂ ಬದಲಾವಣೆ ಆಗಿದೆ. ಸಂಪುಟ ರಚನೆಯಾಗಿ, ಖಾತೆ ಹಂಚಿಕೆಯೂ ಆಗಿದೆ. ಆದರೆ ಅಸಮಾಧಾನ ಮಾತ್ರ ಇನ್ನೂ ತಣ್ಣಗಾಗಿಲ್ಲ. ಇದರಿಂದ ಬಿಜೆಪಿ ಸರ್ಕಾರದಿಂದ ಯಾವುದೇ ಕೆಲಸ ಸರಿಯಾಗಿ ಆಗುತ್ತಿಲ್ಲ ಎನ್ನುವುದು ರಾಜ್ಯಕ್ಕೆ ಗೊತ್ತಿರುವ ವಿಚಾರ. ಸಮಸ್ಯೆಯಲ್ಲಿಯೇ ಸರ್ಕಾರ ನಡೆಯುತ್ತಿದೆ.
ಅವರಲ್ಲಿನ ಖಾತೆ ಹಂಚಿಕೆಯಲ್ಲಿ ಅಸಮಾಧಾನ ಜಗಳ ನಡೆಯುತ್ತಿದ್ದು, ಇದು ರಾಜ್ಯದ ಜನರ ಮೇಲೆ ಪರಿಣಾಮ ಬೀರಲಿದೆ. ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ನೀಡಿಲ್ಲ. ಈ ಬಗ್ಗೆ ಕಳೆದ ವರ್ಷ ಕಾಂಗ್ರೆಸ್ ಹೋರಾಟ ನಡೆಸಿದಾಗ, 5 ಲಕ್ಷ ಘೋಷಣೆ ಮಾಡಿದರು.
ಆದರೆ ಎಲ್ಲರಿಗೂ ಹಣ ದೊರೆತಿಲ್ಲ. ಈ ಬಾರಿ ಮತ್ತೆ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು. ಮೊಟ್ಟೆ ಹೋರಾಟ ಕೈ ಬಿಡಲ್ಲ : ಸರ್ಕಾರದ ತಪ್ಪುಗಳನ್ನು ಕಾಂಗ್ರೆಸ್ ಪಕ್ಷ ನಿರಂತರವಾಗಿ ಖಂಡಿಸಿ ಪ್ರತಿಭಟಿಸಲಾಗುತ್ತಿದೆ.
ಉದಾಹರಣೆಗೆ ಶಶಿಕಲಾ ಜೊಲ್ಲೆ ಅವರ, ಭ್ರಷ್ಟಾಚಾರದ ಬಗ್ಗೆ ರಾಜ್ಯದ ತುಂಬೇಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಪ್ರತಿಭಟನೆ ಮಾಡಿದ್ದೇವೆ. ಫೇಸ್ ಬುಕ್ ನಲ್ಲಿ ಅಭಿಯಾನವೂ ಕೂಡಾ ಆರಂಭವಾಗಿದೆ. ತತ್ತಿ ಬಿಡಲ್ಲ, ಬೀಡುವುದಕ್ಕೆ ಆಗುವುದಿಲ್ಲ. ತತ್ತಿ ವಿರುದ್ಧ ನಮ್ಮ ಹೋರಾಟ ನಡೆದಿದೆ ಎಂದು ಲೇವಡಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಶಾಸಕ ಅಶೋಕ ಪಟ್ಟಣ, ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚೀಂಗಳೆ, ಸುನೀಲ ಹನಮನ್ನವರ, ಮಲ್ಲಪ್ಪ ಮುರಗೋಡ, ಅರವಿಂದ ದಳವಾಯಿ, ವಿಶ್ವಾಸ್ ವೈದ್ಯ, ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಇದ್ದರು.