ಬೆಳಗಾವಿ: ರಾಜ್ಯದಲ್ಲಿ ಕೋವಿಡ್, ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಹಾನಿಯಾಗಿದೆ. ಇಂತಹ ಸಂದರ್ಭದಲ್ಲಿ ಖಾತೆಗೊಸ್ಕರ ಕಿತ್ತಾಡುತ್ತಿದ್ದಾರೆ. ಇದಕ್ಕೆ ಅಧಿಕಾರದ ದಾಹ ಎಂದು ಹೇಳಲು ಭಯಸುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ಆತಂರಿಕ ವಿಚಾರಗಳನ್ನು ನಾವು ಮಾತನಾಡಬಾರದು. ಆದರೆ, ಸಂಕಷ್ಟದ ವೇಳೆಯಲ್ಲಿ ಅಧಿಕಾರಕ್ಕಾಗಿ ಜಗಳ ಮಾಡುತ್ತಿದ್ದಾರೆ. ಇದಕ್ಕೆ ಬೇರೆ ಏನು ಅನ್ನಲೂ ಸಾಧ್ಯ ಎಂದು ಬೇಸರ ವ್ಯಕ್ತ ಪಡಿಸಿದರು. ಕಳೆದ ಬಾರಿ ಪ್ರವಾಹದ ಅನುದಾನವೇ ಬಿಡುಗಡೆಯಾಗಿಲ್ಲ. ಈಗಿನ 2000 ಕೋಟಿ ರೂ. ಹಾನಿಯಾಗಿದೆ ಎನ್ನುತ್ತಾರೆ. ಜನರಿಗೆ ಬಿಜೆಪಿ ಸರ್ಕಾರ ಎಂದರೆ ಜುಮಲಾ ಸರ್ಕಾರ ಎಂದು ಭಾಸವಾಗುತ್ತಿದೆ. ಇಂದಿರಾ ಗಾಂಧಿಜೀಯವರ ರಕ್ತ ಈ ದೇಶದ ಭೂಮಿಯಲ್ಲಿ ಉಳಿದು ಹೋಗಿದೆ. ಅವರ ಹೆಸರನ್ನು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಬೆಳಗಾವಿಗೆ ಭೇಟಿ ನೀಡದ ಸಿಎಂ ಬಸವರಾಜ ಬೊಮ್ಮಾಯಿ ವಿಚಾರದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹೊಸ ಸಿಎಂ ಇದಾರೆ, ಈಗಲೇ ಅವರ ಬಗ್ಗೆ ಮಾತನಾಡಲೂ ಇಷ್ಟು ಪಡುವುದಿಲ್ಲ. ಬೆಳಗಾವಿಗೆ ಅವರು ಬರುತ್ತಾರೆ. ನೆರೆ ಪರಿಹಾರ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.