ಲಸಿಕಾಮೇಳಕ್ಕೆ ಸಂಸದೆ ಮಂಗಳಾ ಅಂಗಡಿ ಚಾಲನೆ

  • 14 Jan 2024 , 10:19 PM
  • Belagavi
  • 93

ಬೆಳಗಾವಿ:ಸಂಭವನೀಯ ಮೂರನೇ ಅಲೆ‌ ಹಿನ್ನೆಲೆಯಲ್ಲಿ ಎಲ್ಲರಿಗೂ ಕೋವಿಡ್ ನಿರೋಧಕ ಲಸಿಕೆ ನೀಡುವ ಮಹತ್ತರ ಉದ್ದೇಶದಿಂದ ಸರಕಾರವು ಇಂದು ರಾಜ್ಯದಾದ್ಯಂತ ಲಸಿಕಾಮೇಳ ಆಯೋಜಿಸಿದೆ. ಎಲ್ಲ ನಾಗರಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಂಸದರಾದ ಮಂಗಳಾ‌ ಸುರೇಶ್ ಅಂಗಡಿ ಮನವಿ ಮಾಡಿಕೊಂಡರು.

ನಗರದ ಸರದಾರ ಹೈಸ್ಕೂಲ್ ಆವರಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಲಸಿಕಾಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬೆಳಗಾವಿ ‌ಜಿಲ್ಲೆಯಲ್ಲಿ ಮೂರು ಲಕ್ಷ ಲಸಿಕೆಗಳನ್ನು ನೀಡುವ ಗುರಿ‌ ಹೊಂದಲಾಗಿದೆ. ಆ ಪ್ರಕಾರ ‌ಜಿಲ್ಲೆಯಾದ್ಯಂತ ಲಸಿಕಾಮೇಳ ಆರಂಭಗೊಂಡಿರುತ್ತದೆ ಎಂದು‌ ಹೇಳಿದರು.

ಇದೇ ವೇಳೆ ಮಾತನಾಡಿದ ಶಾಸಕ ಅನಿಲ್ ಬೆನಕೆ‌ ಅವರು, ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ‌ ನೀಡುವುದು ಸರಕಾರದ‌ ಆಶಯವಾಗಿದೆ. ಈ ನಿಟ್ಟಿನಲ್ಲಿ ಲಸಿಕಾಮೇಳ ಹಮ್ಮಿಕೊಳ್ಳಲಾಗಿದೆ ಎಂದರು.

ಇದುವರೆಗೆ ಲಸಿಕೆ ಪಡೆಯದೇ ಇರುವವರು ಹಾಗೂ ಮೊದಲ ಡೋಸ್ ಪಡೆದುಕೊಂಡು ನಿಗದಿತ ಅವಧಿಯನ್ನು ಪೂರೈಸಿದವರು ಲಸಿಕೆ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read All News