ಬೆಳಗಾವಿ:' ಕೇಂದ್ರ ಬಿಜೆಪಿ ಸರ್ಕಾರ ಚರ್ಚೆಯನ್ನು ಸಹ ಮಾಡದೇ ಕೊರೊನಾ ಸಂದರ್ಭದಲ್ಲಿ ಅನುಷ್ಠಾನ ಮಾಡಿರುವ ರಾಷ್ಟ್ರೀಯ ಶಿಕ್ಷಣ ನೀತಿ, ಕುತಂತ್ರ ನೀತಿಯಾಗಿದೆ ' ಎಂದು ವಿಧಾನಪರಿಷತ್ ಸದಸ್ಯ, ಎಐಸಿಸಿ ಮಾಜಿ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಕಿಡಿ ಕಾರಿದರು.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ' ರಾಷ್ಟ್ರೀಯ ಶಿಕ್ಷಣ ನೀತಿ ಬೇರೆ ರಾಜ್ಯಗಳಲ್ಲಿ ಅನುಷ್ಠಾನವಾಗಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ತರಾತೂರಿಯಲ್ಲಿ ಜಾರಿಗೊಳಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂಘ ಪರಿವಾರದ ಗುಪ್ತ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತರುವ ಷಡ್ಯಂತ್ರ ನಡೆಯುತ್ತಿದೆ. ಅದರ ವಿರುದ್ಧ ಧ್ವನಿ ಎತ್ತಬೇಕೆಂದು ಘಟಪ್ರಭಾದಲ್ಲಿ ನಡೆಯುವ ತರಬೇತಿ ಶಿಬಿರದಲ್ಲಿ ಚರ್ಚೆ ಮಾಡಲಿದ್ದೇವೆ' ಎಂದು ಹೇಳಿದರು.
'ಬಿಜೆಪಿ ಸರ್ಕಾರದ ಗುಂಡಾಗಿರಿ ಹೊಸದೇನು ಅಲ್ಲ. ನಿರಂತರ ಗುಂಡಾಗಿರಿ ನಡೆಯುತ್ತಲೇ ಇದೆ. ಇದೇ ಕಾರಣದಿಂದ ಕಾರವಾರದಲ್ಲಿ ಪೊಲೀಸ್ ಠಾಣೆಯಲ್ಲಿ ಪತ್ರಿಭಟನೆ ನಡೆಸಿದ್ಧೇನೆ. ಇನ್ನೂ ಮುಂದೆ ಬಿಜೆಪಿ ಕಾರ್ಯಕರ್ತರ ಗುಂಡಾಗಿರಿ ಮುಂದುವರೆದಿದ್ದೇ ಆದರೆ ಕಾಂಗ್ರೆಸ್ ಪಕ್ಷದಿಂದ ಉಗ್ರ ಹೋರಾಟ ಮಾಡಲಾಗುತ್ತದೆ ' ಎಂದು ಎಚ್ಚರಿಸಿದರು.
' ಬೆಳಗಾವಿ ದಕ್ಷಿಣ ಮತಕ್ಷೇತ್ರದ ವಡಗಾವಿಯಲ್ಲಿ ಅವಧಿ ಮುಗಿದ ಆಹಾರ ಕಿಟ್ ಗಳನ್ನು ಅಕ್ರಮವಾಗಿ ವಿತರಣೆ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತೆ ಸರಳಾ ಸಾತಪುಟೆ ಎಂಬುವರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಸರಳಾ ಅವರು ಶಹಾಪುರ ಠಾಣೆಯಲ್ಲಿ ಐವರು ಅರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ' ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ., ಮುಖಂಡ ರಾಜೇಂದ್ರ ಪಾಟೀಲ ಇದ್ದರು.