ಬೆಳಗಾವಿ :ಬೆಂಗಳೂರು ಕವಿಪುರಂದಲ್ಲಿರುವ ಮರಾಠಾ ಸಮಾಜದ ಜಗದ್ಗುರು ಪೀಠ ಗೋಸಾಯಿ ಮಹಾ ಸಂಸ್ಥಾನ ಭವಾನಿ ಪೀಠ ದತ್ತ ಪೀಠದ ಶ್ರೀ ಮಂಜುನಾಥ ಸ್ವಾಮೀಜಿಗಳ ಪಟ್ಟಾಧೀಕಾರ ಮಹೋತ್ಸವಕ್ಕೆ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯನ್ನು ಆಹ್ವಾನಿಸಿ ಮಂಜುನಾಥ ಸ್ವಾಮೀಜಿ ಪಟ್ಟಾಧಿಕಾರಕ್ಕೆ ಬರಲು ಗುರುವಾರ ನಗರದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದಾಂತಾಚಾರ್ಯ ಮಂಜುನಾಥ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಎಂದರೆ ಎಲ್ಲಾ ಸಮುದಾಯದ ಸ್ವಾಮೀಜಿಗಳೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದಾರೆ. ಅಲ್ಲದೆ, ನಮ್ಮ ಭವಾನಿ ದತ್ತ ಪೀಠದ ಜತೆಗೆ ವಿಶೇಷವಾದ ಕಾಳಜಿ ಹೊಂದಿದ್ದಾರೆ. ಇದೇ ಫೆ.10 ರಿಂದ 14ರ ವರೆಗೆ ಪಟ್ಟಾಧಿಕಾರ ಮಹೋತ್ಸವ ಜರುಗಲಿದ್ದು ಈ ಕಾರ್ಯಕ್ರಮದಲ್ಲಿ ಇಂಚಲ ಶಿವಾನಂದ ಭಾರತಿ ಸ್ವಾಮೀಜಿ, ಕಾಶಿ ಪೀಠದ ಜಗದ್ಗುರುಗಳು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸದ್ಗುರು ವಿನಯ ಗುರುಜೀ ಸೇರಿದಂತೆ ಹಲವಾರು ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದರು.
ಫೆ.13 ರಂದು ನಡೆಯುವ ಕಾರ್ಯಕ್ರಮಕ್ಕೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಸಾನಿದ್ಯ ವಹಿಸಲು ಆಹ್ವಾನಿಸಲಾಗಿದೆ ಎಂದರು. ಕೊರೊನಾ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಪಟ್ಟಾಧಿಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮರಾಠಾ ಸಮಾಜ ಕರ್ನಾಟಕ, ಭಾರತ ಸೇರಿದಂತೆ ಅನೇಕ ಭಾಗದಲ್ಲಿದೆ. ಎಲ್ಲಾ ಭಾಗದಲ್ಲಿರುವ ಸದ್ಬಕ್ತರು ಸುದ್ದಿ ವಾಹಿನಿಯಲ್ಲಿ ಪಟ್ಟಾಧಿಕಾರದ ಮಹೋತ್ಸವ ವೀಕ್ಷಿಸಿ ಕೊರೊನಾ ಕಳೆದ ನಂತರದಲ್ಲಿ ಎಲ್ಲಾ ಭಕ್ತರು ಆಗಮಿಸಿ ಎಂದರು.
ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಂಜುನಾಥ ಸ್ವಾಮೀಜಿ ಅವರು ನಮ್ಮ ಜಿಲ್ಲೆಯವರಾಗಿದ್ದಾರೆ. ವೇದಾಂತಾಚಾರ್ಯ ಪದವಿದರರು, ಕನ್ನಡ, ಮರಾಠಿ, ಸಂಸ್ಕೃತ ಹಾಗೂ ಹಿಂದಿ ಭಾಷೆಯಲ್ಲಿ ಪ್ರವಚನವನ್ನು ಅದ್ಬುತವಾಗಿ ನೀಡುವ ಶ್ರೀಗಳು ವಿಶೇಷವಾಗಿ ಗಂಗಾರತಿ ಕಾರ್ಯಕ್ರಮ ಕಾಶಿ ಗಂಗಾತೀರದಲ್ಲಿ ನಡೆದ ಸಂದರ್ಭದಲ್ಲಿ ಇವರೇ ನೇತೃತ್ವ ವಹಿಸಿಕೊಂಡ ಕನ್ನಡಿಗರು ಇವರು.
ಗೀತಾಂಬೃತ ರಾಗವಲ್ಲಿ ಎಂಬ ಸಿಡಿಯನ್ನು ಹೊರ ತರುತ್ತಿದ್ದಾರೆ. ಭಗವತ್ ಗೀತೆಯನ್ನು 51ಕ್ಕೂ ಹೆಚ್ಚು ರಾಗದಲ್ಲಿ ಭಗವತ್ ಗೀತೆಯಲ್ಲಿ ರಾಗ ರಚಿಸಿ ಹಾಡಿರುವ ಇವರು ನಮ್ಮ ಭಾಗದವರು ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದರು.
ಬುಡಾ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ವಿ.ಹಿರೇಮಠ, ವೀರುಪಾಕ್ಷಯ್ಯ ನೀರಲಗಿಮಠ, ಡಾ.ಸೋನಾಲಿ ಸರ್ನೋಬತ್, ಶ್ರೀಜೋತ ಸರ್ನೋಬತ್, ರಾಹುಲ್ ಪವಾರ್, ಸಂಜು ಬೋಸಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.