ರಾಣೇಬೆನ್ನೂರ: ಜಿಲ್ಲಾಡಳಿತದ ವತಿಯಿಂದ ತಮ್ಮ ವಾಸಸ್ಥಳದ ಸಮೀಪದ ಅರಣ್ಯ ಪ್ರದೇಶಕ್ಕೆ ಸೇರಿದ ಜಾಗೆಯಲ್ಲಿ ಯಾವುದೇ ಕಾರಣಕ್ಕೂ ಕೋವಿಡ್ನಿಂದ ಮೃತಪಟ್ಟವರ ಶವ ಸಂಸ್ಕಾರ ನಡೆಸಬಾರದು ಆಗ್ರಹಿಸಿ ತಾಲೂಕಿನ ಗಂಗಾಜಲ, ಬಸಲಿಕಟ್ಟಿ ತಾಂಡಾ ಹಾಗೂ ಗೋವಿಂದ ಬಡಾವಣೆ ನಿವಾಸಿಗಳು ಬುಧವಾರ ಗಂಗಾಜಲ ತಾಂಡಾ ಬಳಿಯ ಮೆಡ್ಲೇರಿ ರಸ್ತೆಯನ್ನು ಬಂದ್ ಮಾಡಿ ದಿಢೀರ ಪ್ರತಿಭಟನೆ ನಡೆಸಿದರು. ಕೋವಿಡ್ನಿಂದ ಮೃತಪಟ್ಟ ಮೂರ್ನಾಲ್ಕು ಜನರ ಶವಸಂಸ್ಕಾರ ನೆರವೇರಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಮೇಘರಾಜ ಹಾಗೂ ಪ್ರಭು ಕೆಳಗೀನಮನಿ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು. ತಾಲೂಕಿನಲ್ಲಿ ಕ್ರಮೇಣ ಕೊರೊನಾ ಸಂಖ್ಯೆ ಇಳಿಮುಖವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಅಂತರ ಮರೆತು ಸರಿಯಾದ ಮಾಸ್ಕಗಳನ್ನು ಧರಿಸದೇ ಗುಂಪುಗೂಡಿ ಪದೇ ಪದೇ ಪ್ರತಿಭಟನೆ ನಡೆಸುವುದು ಸರಿಯಲ್ಲ. ಇದಕ್ಕೆ ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗಿದೆ.ಅದಕ್ಕೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಎಲ್ಲರೂ ಸರಕಾರದ ನಿಯಮಗಳನ್ನು ಪಾಲಿಸಲೇಬೇಕು, ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳ ಬೇಕಾಗುತ್ತದೆ ಪೋಲಿಸರು ಜನರಿಗೆ ಎಚ್ಚರಿಸಿದಾಗ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. ರಸ್ತೆತಡೆದು ಪ್ರತಿಭಟನೆ ನಡೆಸಿದ್ದರಿಂದ ಮೂರುತಾಸು ಸಂಚಾರ ಅಸ್ತವ್ಯಸ್ತವಾಗಿತ್ತು. ಸಾಮಾಜಿಕ ಅಂತರವಿಲ್ಲದೆ ಹಾಗೂ ಮಾಸ್ಕ್ ಧರಿಸದೆ ಪ್ರತಿಭಟನೆಯಲ್ಲಿ ತೊಡಗಿದ್ದ ತಾಂಡಾದ ಅನೇಕ ಜನರು ಸರಕಾರದ ನಿಯಮಗಳನ್ನು ಗಾಳಿಗೆ ತೂರಿದಂತಾಯಿತು.