ಛತ್ರಪತಿ ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆ ಹಿನ್ನೆಲೆ: ಅಡಿಪಾಯದ ಕಾಂಕ್ರೀಟ್ ಕಾಮಗಾರಿಗೆ ಚನ್ನರಾಜ ಹಟ್ಟಿಹೊಳಿ ಪೂಜೆ

  • 14 Jan 2024 , 10:49 PM
  • Belagavi
  • 106

ಬೆಳಗಾವಿ : ಬೆಳಗಾವಿ ಗ್ರಾಮೀಣ ಪ್ರದೇಶದ ಐತಿಹಾಸಿಕ ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಅಡಿಪಾಯಕ್ಕೆ ಕಾಂಕ್ರೀಟ್ ಹಾಕುವ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಭಾನುವಾರ ಪೂಜೆ ನೆರವೇರಿಸಿದರು.

ರಾಜಹಂಸಗಡ ಕೋಟೆಯ ಅಭಿವೃದ್ಧಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯ ಬಿಡಿ ಭಾಗಗಳ ಕೆತ್ತನೆ ಈಗಾಗಲೇ ಪೂರ್ಣಗೊಂಡಿದೆ. ಅತೀ ಶೀಘ್ರದಲ್ಲೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸರ್ವ ಮುಖಂಡರ ಸಭೆಯನ್ನು ಕರೆದು ಹಿಂದೂ ಸಂಸ್ಕ್ರತಿ, ಸಂಪ್ರದಾಯದಂತೆ ಮೂರ್ತಿ ಪ್ರತಿಷ್ಠಾಪನೆಯ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಚನ್ನರಾಜ ಹಟ್ಟಿಹೊಳಿ ತಿಳಿಸಿದರು.

ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ವಿಶ್ವಗುರು ಬಸವಣ್ಣ, ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಇನ್ನೂ ಅನೇಕ ಮಹನೀಯರು ದೇಶಕ್ಕಾಗಿ ತಮ್ಮ ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆ. ಇವರೆಲ್ಲರ ತ್ಯಾಗ ಬಲಿದಾನಗಳನ್ನು ಸದಾಕಾಲ ಸ್ಮರಿಸಬೇಕು, ಮುಂದಿನ ಪೀಳಿಗೆಗೆ ಅವುಗಳನ್ನು ತಿಳಿಸಬೇಕು ಎನ್ನುವ ಉದ್ದೇಶದಿಂದ ಪುತ್ಥಳಿಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಅನಂತ ಗುರವ್, ಕಿರಣ, ಉಮೇಶ ಪವಾರ, ನಾಗರಾಜ ಜಾಧವ್, ಸುರುಜ್ ತೋರವತ್, ಮೊನೇಶ್ರೀ ತೋರವತ್, ಬಾಳು ಗುರವ್, ಇಂಜಿನಿಯರ್ ಮುತಗೇಕರ್, ಕಿರಣ ಚತುರ, ಸಚಿನ ಸಾಮಜಿ, ಕಿರಣ ಪಾಟೀಲ, ಲಕ್ಷ್ಮಣ ಚೌಹಾನ್, ಪರುಶರಾಮ ನಿಲಜಕರ್, ಶಿವಾಜಿ ಬಸ್ತವಾಡಕರ್, ಆನಂದ ಇಂಗಳೆ, ಯಲ್ಲಪ್ಪ ಎಳೆಬೈಲ್ಕರ್, ಸಿದ್ದಪ್ಪ ಛತ್ರೆ, ಬಾಹು ಪವಾರ್, ಶುಭಂ ತೋರವತ್, ಶ್ರೀಧರ್ ಮುಂತಾದವರು ಉಪಸ್ಥಿತರಿದ್ದರು.

Read All News