ಬೆಳಗಾವಿ: ಆಝಾದಿ ಕಾ ಅಮೃತ ಮಹೋತ್ಸವ" ಅಂಗವಾಗಿ ಜಿಲ್ಲೆಯ 5 ಸ್ಥಳಗಳಾದ ಹುಲಕುಂದ, ಹುದಲಿ, ಬೆಳವಡಿ, ಕಿತ್ತೂರು ಹಾಗೂ ನಂದಗಡದಲ್ಲಿ ಶನಿವಾರ ನಡೆಯಲಿರುವ "ಅಮೃತ ಭಾರತಿಗೆ ಕನ್ನಡದಾರತಿ" ಕಾರ್ಯಕ್ರಮದ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ "ಆಝಾದಿ ಕಾ ಅಮೃತ ಮಹೋತ್ಸವ" ಅಂಗವಾಗಿ "ಅಮೃತ ಭಾರತಿಗೆ ಕನ್ನಡದಾರತಿ" ಕಾರ್ಯಕ್ರಮ -2022 ರ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಅಮೃತ ಮಹೋತ್ಸವವನ್ನು ಬಿನ್ನವಾಗಿ ಆಚರಿಸುವ ಉದ್ದೇಶದಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಗುರುತಿಸಲಾದ ಆಯ್ದ 75 ಸ್ಥಳಗಳಲ್ಲಿ ಅಮೃತ ಮಹೋತ್ಸವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ 5 ಸ್ಥಳಗಳಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಉತ್ಸವ ಮಾದರಿಯ ಕಾರ್ಯಕ್ರಮ ಇದಾಗಿದ್ದು, ಕುಂಭಮೇಳ ನಡೆಯಲಿದೆ. ಮೆರವಣಿಗೆಯಲ್ಲಿ ಕಲಾತಂಡಗಳು, ಯುವಶಕ್ತಿ ಸಂಘಗಳು, ಸ್ವ ಸಹಾಯ ಸಂಘಗಳು, ಸಾರ್ವಜನಿಕರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ರಾಜ್ಯದ ಏಕ ಕಾಲಕ್ಕೆ ಕಾರ್ಯಕ್ರಮವನ್ನು ಆಚರಿಸಲು ಮೇ.28 ರಂದು ನಡೆಸಲು ತೀರ್ಮಾನಿಸಲಾಗಿತ್ತು ಆದರೆ ಸ್ಥಳೀಯ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಕಾರ್ಯಕ್ರಮಗಳನ್ನು ಮುಂದೂಡಲಾಗಿತ್ತು ಎಂದು ಹೇಳಿದರು.
ಶೀಲಾಫಲಕಅನಾವರಣ:
ಕಾರ್ಯಕ್ರಮದಲ್ಲಿ ಉಪನ್ಯಾಸ, ದೇಶದ ಸಂಸ್ಕೃತಿ, ದೇಶಾಭಿಮಾನ ಮೂಡಿಸುವ ಕವಾತ್ಮಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ. ಜೊತೆಗೆ ಅಮೃತ ಮಹೋತ್ಸವ ಅಂಗವಾಗಿ ಶಿಲಾಫಲಕಗಳು ಅನಾವರಣಗೊಳಿಸಲಾಗುವುದು.
ಸ್ವಾತಂತ್ರ್ಯದ ಹೋರಾಟದ ಸ್ಮರಣ ಶಿಲಾಫಲಕ ಪ್ರತಿಷ್ಠಾಪನೆ, ಸಾಕ್ಷ್ಯ ಚಿತ್ರ ಪ್ರದರ್ಶನ, ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಾರತದ ಕೊಡುಗೆ ಕುರಿತು ಉಪನ್ಯಾಸ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಆಶಯವುಳ್ಳ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.
ಸ್ಥಳೀಯಕಲ್ಯಾಣಮಂಟಪಬಳಕೆಗೆಸೂಚನೆ:
ಮಳೆಗಾಲ ಇರುವುದರಿಂದ ಪೆಂಡಾಲ್ ಹಾಕುವ ಬದಲಿಗೆ ಸ್ಥಳೀಯ ಕಲ್ಯಾಣ ಮಂಟಪಗಳನ್ನು ಬಳಸಿಕೊಳ್ಳಬೇಕು ಇದರಿಂದ ಹೆಚ್ಚು ಅನುದಾನ ಅವಶ್ಯವಿರುವ ಸ್ಥಳಗಳ ಕಾರ್ಯಕ್ರಮಗಳಿಗೆ ಅನುದಾನ ಉಪಯೋಗ ಆಗಲಿದೆ ಹಾಗೂ ಸಮರ್ಪಕ ಬಳಕೆ ಅವಕಾಶ ಸಿಗಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಈ ವೇಳೆ ಮಾತನಾಡಿದ ಕಿತ್ತೂರು ಶಾಸಕ ಮಹಾಂತೇಶ ದೊಡಗೌಡ್ರ ಅವರು ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಇತರೆ ಸಂಸ್ಥೆ ಹಾಗೂ ಸಂಘಟನೆಗಳು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು.
ಜಿಲ್ಲೆಯ 5 ಸ್ಥಳಗಳಲ್ಲಿ ನಡೆಯಲಿರುವ "ಅಮೃತ ಭಾರತಿಗೆ ಕನ್ನಡದಾರತಿ" ಕಾರ್ಯಕ್ರಮದ ರೂಪ ರೇಷಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು ವಿವರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್. ಹೆಚ್ ವಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಉಮಾ ಸಾಲಿಗೌಡರ, ಬೆಳಗಾವಿಯ ತಹಶೀಲ್ದಾರ್ ಆರ್. ಕೆ ಕುಲಕರ್ಣಿ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.