ಬೆಳಗಾವಿ: ಜನರಿಂದ ಆರಿಸಿ ಹೋದ ಸರಕಾರಗಳನ್ನು ಅಭದ್ರ ಮಾಡಿದರೆ ಮುಂಬರುವ ದಿನಗಳಲ್ಲಿ ಪ್ರಜಾಪ್ರಭುತ್ವಕ್ಕೆ ಭದ್ರತೆ ಇಲ್ಲ ಎನ್ನುವ ಭಾಸವಾಗುತ್ತಿದೆ ಎಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ, ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ರಾಜ್ಯದಲ್ಲಿ ಒಂದು ಅಸಹಾಯಕತೆ ಸೃಷ್ಠಿಯಾಗುತ್ತಿದೆ. ಮತದಾರರಿಗೆ, ಸಂವಿಧಾನಕ್ಕೆ ಅಪಮಾನ ಮಾಡುವ ಕೆಲಸ ನಡೆಯುತ್ತಿದೆ. ಜನರಿಂದ ಆಯ್ಕೆಯಾದ ಸರಕಾರಗಳನ್ನು ಅಭದ್ರ ಮಾಡಿದರೆ ಚುನಾವಣೆ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದ ಅವರು, ಶಾಸಕರನ್ನು ಕುದುರೆ ವ್ಯಾಪಾರ ಮಾಡುವುದರ ಮೂಲಕ ರಾಜಕೀಯಕ್ಕೆ ವ್ಯತಿರಿಕ್ತ ಪರಿಣಾಮವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಇದು ಪ್ರಜಾ ಪ್ರಭುತ್ವಕ್ಕೆ ಶೋಭೆ ತರುವುದಿಲ್ಲ ಎಂದರು.
ಸರಕಾರಗಳನ್ನು ಉಳಿಸುವ ಸಂದರ್ಭದಲ್ಲಿ ಬಿಜೆಪಿಯವರು ಇಡಿ ನೋಟಿಸ್ ನೀಡಿ ಬೇದರಿಕೆ ಹಾಕುವ ತಂತ್ರ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ಮುಖಂಡ ಸಂಜಯ ರಾವತ್ ಅವರಿಗೆ ಇಡಿ ಬುಲಾವ್ ಮಾಡುತ್ತಾರೆ ಎಂದರೆ ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗುವುದಿಲ್ಲ ಎಂದು ಕೊಂಡಿದ್ದಾರೆ. ಮೊದಲು ಬೆಕ್ಕಿನ ಪಾತ್ರ ಮಾಡುವವರು ಯಾರು ಎನ್ನುವುದನ್ನು ಕಂಡು ಹಿಡಿಯಬೇಕು ಎಂದರು.
ಎಲ್ಲಿಯವರೆಗೆ ಯುವಕರು, ಪ್ರಜ್ಞಾವಂತರು, ಮತದಾರರು ಬಿಜೆಪಿಯ ಹಿಡನ್ ಅಜೆಂಡ್, ಆರ್ ಎಸ್ ಎಸ್ ನೀತಿ, ತಿಳುದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಪ್ರಜಾತಂತ್ರ ವ್ಯವಸ್ಥೆ ಬದಲಾಗುವದಿಲ್ಲ. ಯಾವುದೇ ಪಕ್ಷ ಎಷ್ಟೇ ಬಂಬಡಾ ಹೊಡ್ಕೊಂಡರು ಸಾಧ್ಯವಾಗುವುದಿಲ್ಲ ಎಂದು ಹರಿಹಾಯ್ದರು.
ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಮೂರು ಪಕ್ಷಗಳು ಸಿದ್ದತೆ ನಡೆಸಿವೆ. ಈ ಬಾರಿ ಕಾಂಗ್ರೆಸ್ ಜನರ ವಿಶ್ವಾಸ ಗಳಿಸಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಈಗ ಕಷ್ಟದ ಪರಿಸ್ಥಿತಿಯಲ್ಲಿದೆ. ಇಂದಿರಾ ಗಾಂಧಿ ಅವರು ಕಷ್ಟದಲ್ಲಿದ್ದಾಗ ಇದೇ ಕರ್ನಾಟಕದ ಜನರು ಕಾಂಗ್ರೆಸ್ ಗೆ ಕೈ ಹಿಡಿದಿದ್ದರು. ಮತ್ತೆ ಇಂದಿರಾಗಾಂಧಿ ಅವರಿಗೆ ಶಕ್ತಿ ಬಂತು. ಅದೇ ಮಾದರಿಯಲ್ಲಿ ಈ ಬಾರಿಯೂ ಆಗುತ್ತದೆ ಎಂದು ಭವಿಷ್ಯ ನುಡಿದರು.