ಬೆಳಗಾವಿ: ಗ್ರಾಮೀಣ ಪ್ರದೇಶದ ಮೂಲಸೌಕರ್ಯಗಳ ಅಭಿವೃದ್ಧಿಗೆ ಈವರೆಗೆ ಅಪಾರ ಪ್ರಮಾಣದ ಅನುದಾನ ತರಲಾಗಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತಾವು ಬದ್ಧ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧೆಡೆ 1.33 ಕೋಟಿ ರೂ. ವೆಚ್ಚದ ನಾನಾ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಚಿಕ್ಕುಬಾಗದಲ್ಲಿ ಆರ್ ಸಿಸಿ ಚರಂಡಿ ನಿರ್ಮಾಣ ಹಾಗೂ ಬೆಳಗಾವಿ ನಗರದ ಭಜಂತ್ರಿ ಕಾಲೋನಿ ಹೊಸ ವೈಭವ ನಗರ ಮತ್ತು ಕಂಗ್ರಾಳಿ ಬಿಕೆ ಗ್ರಾಮದಲ್ಲಿ ಆರ್ ಸಿ ಸಿ ಚರಂಡಿ, ಪೇವರ್ಸ್ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಸ್ಥಳೀಯ ನಿವಾಸಿಗಳ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವರಾಜಣ್ಣ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ, ಜಯರಾಮ ಪಾಟೀಲ, ಉಮೇಶ ಕಾಕತ್ಕರ್, ಶಂಕರ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.