ಬಂಕಾಪುರ: ಸತತ ಸುರಿಯುತ್ತಿರವ ಮಳೆಯಿಂದಾಗಿ ಹಾನಿಗೆ ಒಳಗಾದ ಮನೆಗಳ ಪರಿಶೀಲನೆಗೆ ಆಗಮಿಸಿದ ಪಿ.ಡಿ.ಒ. ಇಮ್ತಿಯಾಜ್ ಮುಲ್ಲಾ ಹಾಗು ಗ್ರಾಮಲೆಕ್ಕಾಧಿಕಾರಿ ಮಂಜುನಾಥ ಮುಳಗುಂದ ರವರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೋಂಡ ಘಟನೆ ಸಮಿಪದ ಗುಡ್ಡದಚನ್ನಾಪುರ ಗ್ರಾಮದಲ್ಲಿ ನಡದಿದೆ. ಕಳೆದ ಬಾರಿ ನೆರೆ ಹಾವಳಿಯಿಂದ ಬಿದ್ದ ಮನೆಗಳಿಗೆ ಪರಿಹಾರ ಇದೂ ವರೆಗೂ ತಲುಪಿಲ್ಲ. ಮತ್ತೆ ಈ ಬಾರಿ ಮಳೆಯಿಂದ ಹಾನಿಯಾದ ಮನೆಗಳ ಸರ್ವೇ ಕಾರ್ಯಕ್ಕೆ ಆಗಮಿಸಿದ್ದಿರಿ, ಮನೆಗಳ ಪರಿಶೀಲನೆಯಲ್ಲಿ ಕಳೆದ ಬಾರಿ ಆದ ಲೋಪ, ದೋಶಗಳನ್ನು ತಮ್ಮಿಂದ ಇದುವರೆಗೂ ಸರಿಪಡಿಸಲಾಗಿಲ್ಲ, ಈ ಹಿಂದೆಯೂ ತಹಶೀಲ್ದಾರ ಚಂದ್ರಶೇಖರ ಗಾಳಿ ಯವರು ಇರುವಾಗ ನೆರೆಹಾವಳಿಯಿಂದ ಮನೆಕಳೆದುಕೋಂಡ ನಿಜವಾದ ಫಲಾನುಭವಿಗಳಿಗೆ ಸಿ’ ಕೆಟಗೆರಿ ನೀಡಿ, ಅನರ್ಹ ಫಲಾನುಬವಿಗಳಿಗೆ ಎ’ ಕೆಟಗೆರಿ ನೀಡಿ ನಿಜವಾದ ಫಲಾನುಭವಿಗಳನ್ನು ವಂಚಿಸಲಾಗಿತ್ತು.
ಇದರ ವಿರುದ್ಧ ಹೋರಾಟ ಮಾಡಿ ಮರು ಸರ್ವೇ ಮಾಡಿ ನಿಜವಾದ ಫಲಾನುಭವಿಗಳಿಗೆ ಪರಿಹಾರದ ಹಣ ವದಗಿಸುವಂತೆ ತಹಶೀಲ್ದಾರ ಚಂದ್ರಶೇಖರ ಗಾಳಿಯವರಲ್ಲಿ ಮನವಿ ಮಾಡಿದ್ದೆವು. ಮರು ಸರ್ವೇ ಮಾಡಿ ವರ್ಷಗತಿಸುತ್ತಾ ಬಂದರೂ ಕೂಡ ನಿಜವಾದ ಫಲಾನುಭವಿಗಳಿಗೆ ಪರಿಹಾರದ ಹಣ ತಲುಪದೆ ಇರುವುದರಿಂದ ಮನೆ ಕಳೆದುಕೋಂಡ ಫಲಾನುಭವಿಗಳು ನೀರ್ಗತಿಕರಾಗಿ ದನದ ಕೊಟ್ಟಿಗೆ, ಬಾಡಿಗೆ ಮನೆಗಳಲ್ಲಿ ದಿನಗಳನ್ನು ಮುಂದೂಡುತ್ತಿದ್ದಾರೆ. ಪರಿಹಾರದ ಹಣ ಇಂದು ಬರಬಹುದು, ನಾಳೆ ಬರಬಹುದು ಎಂದು ಜಾತಕ ಪಕ್ಷೀಯಂತೆ ಸ್ವಂತ ಸೂರಿನ ಕನಸನ್ನು ಕಾಣುವಂತಾಗಿದೆ ಎಂದು ಗ್ರಾಮಸ್ತರು ಆರೋಪಿಸಿದರು. ಚಂದ್ರಶೇಖರ ಗಾಳಿಯವರು ವರ್ಗಾವಣೆಗೊಂಡ ನಂತರ ಪ್ರಕಾಶ ಕುದರಿಯವರು ಬಂದರು.
ಈಗ ಪ್ರಭಾರಿ ತಹಶೀಲ್ದಾರರಾಗಿ ಸಿ.ಎನ್.ಬಂಗಿಯವರು ಆಗಮಿಸಿದ್ದಾರೆ. ಬಂದ ತಹಶೀಲ್ದಾರರೆಲ್ಲರಿಗೆ ಮನೆಗಳ ಪರಶೀಲನೆಯಲ್ಲಾದ ಲೋಪ, ದೋಷಗಳ ಬಗ್ಗೆ ಬರಿ ಕಥೆ ಹೇಳುವುದೇ ಆಗಿದೆ, ಆದರೆ ಪರಿಹಾರದ ಹಣ ಇದುವರೆಗೂ ಫಲಾನಿಭವಿಗಳ ಕೈಗೆ ತಲುಪಿಲ್ಲ ಎಂದು ಆರೋಪಿಸಿದರಲ್ಲದೇ ಈ ಬಾರಿ ಮತ್ತೇ ಮಳೆಯಿಂದ ಹಾನಿಯಾದ ಮನೆಗಳ ಕಾಟಾಚಾರದ ಸರ್ವೇ ಮಾಡಲು ಬಂದಿದ್ದೀರಿ ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಸರ್ವೇ ಕಾರ್ಯ ನ್ಯಾಯಸಮ್ಮತವಾಗಬೇಕು. ನಿಜವಾದ ನಿರಾಶ್ರಿತರು ಫಲಾನುಭವಿಗಳಾಗಬೇಕು. ಬಿದ್ದ ಮನೆಗಳ ಸರ್ವೇಕಾರ್ಯ ಮಾಡುವದಿದ್ದರೆ ತಹಶೀಲ್ದಾರ ಸಮ್ಮುಖದಲ್ಲೇ ಮಾಡುವಂತೆ ಗ್ರಾಮಸ್ಥರು ಪಟ್ಟು ಹಿಡಿದರು. ಆಗ ಸರ್ವೇಮಾಡಲು ಬಂದ ಅಧಿಕಾರಿಗಳು, ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಅಲ್ಲಿಂದ ಕಾಲ್ಕಿತ್ತರು.