ನವದೆಹಲಿ: ಕಿಲ್ಲರ್ ಕೊರೋನಾ ಹಾವಳಿ ಮದ್ಯೆಯೇ ಸಂಸತ್ತಿನಲ್ಲಿ ಉಭಯ ಸದನಗಳ ಮುಂಗಾರು ಅಧಿವಶನ ಇಂದಿನಿಂದ ಆರಂಭವಾಗಲಿದೆ. ಮೊಟ್ಟ ಮೊದಲ ಬಾರಿಗೆ ಎರಡೂ ಸದನಗಳನ್ನು ಬಳಸಿಕೊಂಡು ಒಂದು ಸದನದ ಕಲಾಪ ನಡೆಸುವುದು, ಸಾಮಾಜಿಕ ಅಂತರಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು, ಎರಡು ಪಾಳಿಗಳಲ್ಲಿ ಕಲಾಪ ನಡೆಸುವುದು ಸೇರಿದಂತೆ ಹಲವು ವಿಭಿನ್ನತೆಗಳಿಗೆ ಈ ಬಾರಿಯ ಅಧಿವೇಶನ ಸಾಕ್ಷಿ ಆಗಲಿದೆ. ಗಡಿ ಸಂಘರ್ಷ, ಕೊರೋನಾ ನಿರ್ವಹಣೆ, ಆರ್ಥಿಕತೆ, ಜಿಎಸ್'ಟಿ ನಷ್ಟ ಪರಿಹಾರ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ. ಇತ್ತ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಬಿಜೆಪಿ ಕೂಡ ಸಜ್ಜಾಗಿದೆ. ಈ ಕಲಾಪಗಳಲ್ಲಿ ಭಾಗಿಯಾಗುವ ಸಂಸದರಿಗೆ 72 ಗಂಟೆ ಮುಂಚೆ ಕೊರೊನಾ ಟೆಸ್ಟ್ ಮಾಡಿಸಲು ಸೂಚಿಸಲಾಗಿದ್ದರಿಂದ ಕೊರೊನಾ ಟೆಸ್ಟ್ ಮಾಡಿಸಿರುವ ಸಂಸದರ ಪೈಕಿ ಐದು ಮಂದಿ ಲೋಕಸಭೆ ಸದಸ್ಯರಿಗೆ ಪಾಸಿಟಿವ್ ಇರುವುದು ದೃಢವಾಗಿದೆ.