ಬೆಳಗಾವಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳು ರೈತಪರವಾಗಿದ್ದು ಈ ಕಾಯಿದೆಗಳಿಂದ ರೈತರಿಗೆ ಯಾವುದೇ ತೊಂದರೆಯಾಗದು. ವಿರೋಧ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಅನಗತ್ಯವಾಗಿ ರೈತರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿವೆ ಇದಕ್ಕೆ ರೈತರು ಬಲಿಯಾಗಬಾರದು ಎಂದು ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.
ಇಂದು ನಗರದ ತಿಲಕವಾಡಿಯ ಬಿಜೆಪಿ ಉತ್ತರ ಕ್ಷೇತ್ರದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಅನುಕೂಲಕ್ಕಾಗಿ ಭೂಸುಧಾರಣೆ ತಿದ್ದುಪಡಿ ಹಾಗೂ ಎಪಿಎಂಸಿ ಮಸೂದೆ ಜಾರಿಗೆ ತರಲಾಗಿದೆ. ಈ ಕಾನೂನು ರೈತರಿಗೆ ಅತ್ಯಂತ ಪೂರಕವಾದ ಕಾನೂನಾಗಿದೆ. ಕೃಷಿ ಕ್ಷೇತ್ರಕ್ಕೆ ಆಸಕ್ತಿವುಳ್ಳಂತ ವಿದ್ಯಾವಂತ ಯುವಕರು ಕೃಷಿ ಕ್ಷೇತ್ರಕ್ಕೆ ಬರುವುದರಿಂದ ಈ ಕ್ಷೇತ್ರವು ಇನ್ನಷ್ಟು ಹೆಚ್ಚು ವಿಸ್ತಾರವಾಗಲಿಕ್ಕೆ ಸಾಧ್ಯವಿದೆ.
ಈ ರಾಜ್ಯದಲ್ಲಿ ಸುಮಾರು 190 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶವಿದ್ದು, ಅದರಲ್ಲಿ ಸುಮಾರು 12 ಲಕ್ಷ ಹೆಕ್ಟೇರ್ ಪ್ರದೇಶ, ಕೃಷಿ ಮಾಡದೆ ಬರಡು ಭೂಮಿಯಾಗಿ ಉಳಿದಿದೆ. ಆದ್ದರಿಂದ ಇನ್ನೂ ಅನೇಕ ಜನ ಕೃಷಿ ಕ್ಷೇತ್ರಕ್ಕೆ ಬರುವುದರಿಂದ ಕೃಷಿ ಕ್ಷೇತ್ರ ಇನ್ನಷ್ಟು ವಿಸ್ತಾರವಾಗುತ್ತದೆ ಹಾಗೂ ಉತ್ಪಾದನೆಯೂ ಹೆಚ್ಚಾಗುತ್ತದೆ.
ಹಾಗೂ ಭೂ ಸುಧಾರಣೆ ಕಾಯ್ದೆಯಲ್ಲಿ 79 ಎ, 79 ಬಿ ಮತ್ತು 80 ರ ತಿದ್ದುಪಡಿಯನ್ನು ಕೃಷಿಯೆತರ ಭೂಮಿ ಖರೀದಿಯಲ್ಲಿ ಅಡಚಣೆ ಆಗದಂತೆ ತಡೆಯುವುದರೊಂದಿಗೆ ಉದ್ಯೋಗ ಸೃಷ್ಟಿಸಲು ಉಪಯುಕ್ತವಾಗಲಿದೆ ಮತ್ತು ಈ ಕಾನೂನಿಂದ ರಪ್ತು ಹೆಚ್ಚಳವಾಗಿ ರಾಜ್ಯಕ್ಕೆ ಲಾಭವಾಗಲಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್, ಹನುಮಂತ ಕೊಂಗಾಲಿ, ರಾಜು ಚಿಕ್ಕನ್ನಗೌಡರ್, ಸುಶಾಂತ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.