ನವದೆಹಲಿ : ದೇಶದ ಕಾನೂನು ಇತಿಹಾಸದಲ್ಲಿ ಬಹು ನಿರೀಕ್ಷಿತ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪನ್ನು ವಿಶೇಷ ನ್ಯಾಯಾಲಯ ಇಂದು ಪ್ರಕಟಿಸಲಿದೆ. ಬಾಬ್ರಿ ಮಸೀದಿ ಧ್ವಂಸದ ಅಂತಿಮ ತೀರ್ಪು ಮಧ್ಯಾಹ್ನ 12 ಗಂಟೆಗೆ ಘೋಷಿಸಲಾಗುವುದು ಎಂದು ಸಿಬಿಐ ವಿಶೇಷ ನ್ಯಾಯಾಲಯದ ಜಡ್ಸ್ ಎಸ್ ಕೆ ಯಾದವ್ ಆದೇಶ ನೀಡಿದ್ದಾರೆ. ಸುಮಾರು 28 ವರ್ಷಗಳ ಹಿಂದಿನ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಬಗ್ಗೆ ಇಡೀ ದೇಶಾದ್ಯಂತ ಕುತೂಹಲದಿಂದ ಕಾಯುತ್ತಿದ್ದು.
ಮುಂದೇನು ಎಂಬುದು ಕೋರ್ಟ್ ತೀರ್ಪಿನ ನಂತರ ತಿಳಿದು ಬರಲಿದೆ. 1992ರ ಮಸೀದಿ ಧ್ವಂಸ ಪ್ರಕರಣದ ಎಲ್ಲಾ 32 ಆರೋಪಿಗಳು ತೀರ್ಪಿನ ದಿನ ಖುದ್ದು ಹಾಜರು ಇರುವಂತೆ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ.ಯಾದವ್ ಸೆಪ್ಟೆಂಬರ್ 16ರಂದೇ ನಿರ್ದೇಶನ ನೀಡಿದ್ದರು.
ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್ ಮತ್ತು ಸಾಧ್ವಿ ರಿತಾಂಬರಾ ಕೂಡ ಆರೋಪಿಗಳ ಪಟ್ಟಿಯಲ್ಲಿದ್ದಾರೆ. ರಾಮ ಮಂದಿರ ನಿರ್ಮಾಣ ಟ್ರಸ್ಟ್ನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಚಂಪತ್ ರಾಯ್ ಕೂಡ ಆರೋಪ ಎದುರಿಸುತ್ತಿದ್ದಾರೆ.
ಆಡ್ವಾಣಿ, ಜೋಶಿ, ಉಮಾ ಭಾರತಿ ಕೋರ್ಟ್ಗೆ ಗೈರಾಗುವ ಸಾಧ್ಯತೆ ಇದೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಘೋಷಣೆ ಹಿನ್ನೆಲೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ಸುತ್ತ - ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಧ್ಯಾಹ್ನ 12 ರ ನಂತರ ತೀರ್ಪು ಏನೆಂಬುದನ್ನು ಕಾದುನೋಡಬೇಕು.