ಗೋಕಾಕ: ದೂರದ ಪಶ್ಚಿಮ ರಾಷ್ಟ್ರದಲ್ಲಿ ಹುಟ್ಟಿದ್ದರೂ ತಾಯಿ ಭಾರತೀಯಗಾಗಿ ತನ್ನ ಸರ್ವಸ್ವವನ್ನು ಸಮರ್ಪಿಸಿದ ಶ್ರೇಷ್ಠ ಪುಷ್ಪ ಸಹೋದರಿ ನಿವೇದಿತಾ ಭಾರತೀಯತೆಯನ್ನು ಅಪ್ಪಿಕೊಂಡು ಆಧ್ಯಾತ್ಮಿಕ ಸಾಧನೆ ಮಾಡಿದರು. ಅವರ ಸಾಧನೆಯನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಇಂದು ಮೆಲಕು ಹಾಕಿದರು. ಗೋಕಾಕ್ ನಗರದಲ್ಲಿಂದು ಸಚಿವರ ಗೃಹ ಕಚೇರಿಯಲ್ಲಿ ಭಗಿನಿ ನಿವೇದಿತಾ ಅವರ 153ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಯಿ ಭಾರತಾಂಬೆಯ ಪದತಲದಲ್ಲಿ ಸಮರ್ಪಿತಗೊಂಡ ಶ್ರೇಷ್ಠ ಪುಷ್ಪವೇ ಭಗಿನಿ ನಿವೇದಿತಾ ಎಂದರು. ಶಿಕ್ಷಣ, ಸೇವೆ, ಕಲೆ, ಸ್ವಾತಂತ್ರ್ಯ, ಹೋರಾಟ, ವಿಜ್ಞಾನ ಎಲ್ಲಾ ಕ್ಷೇತ್ರದಲ್ಲಿಯೂ ರಾಷ್ಟ್ರೀಯತೆ ಮರುಹುಟ್ಟು ಪಡೆಯುವಂತೆ ಭಾರತೀಯರ ಸೇವೆ ಮತ್ತು ಆಧ್ಯಾತ್ಮಿಕ ಚಿಂತನೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟಂತಹಾ ಸಹೋದರಿ ನಿವೇದಿತಾ, ಸ್ವಾಮಿ ವಿವೇಕಾನಂದರ ಮಾನಸ ಪುತ್ರಿಯಾಗಿದ್ದರು. ಅವರಂತೆ ಪ್ರತಿಯೊಬ್ಬ ಮಹಿಳೆಗೂ ದೇಶದ ಮತ್ತು ಧರ್ಮದ ಬಗ್ಗೆ ಕಾಳಜಿ ಇರಬೇಕು. ಆಗ ನಮ್ಮ ದೇಶ ವಿಶ್ವಕ್ಕೇ ಮಾರ್ಗದರ್ಶನ ಮಾಡುವಂತಾಗುತ್ತದೆ ಎಂದು ಸಚಿವ ಜಾರಕಿಹೊಳಿ ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಹಾಗೂ ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.