ಕೆವಾಡಿಯಾ ( ಗುಜರಾತ್ ) : ನರ್ಮದಾ ಜಿಲ್ಲೆಯ ಕೇವಾಡಿಯಾ ಗ್ರಾಮದಲ್ಲಿರುವ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾಪ್ರತಿಮೆ ಸಮೀಪದಲ್ಲಿ ನಿರ್ಮಿಸಿರುವ ಔಷಧೀಯ ಸಸ್ಯ , ಗಿಡಮೂಲಿಕೆಗಳ ಆರೋಗ್ಯ ವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದರು.

ಆರೋಗ್ಯ ವನ ಸುಮಾರು 17 ಎಕರೆ ವಿಸ್ತೀರ್ಣ ಹೊಂದಿದೆ. ಈ ಬೃಹತ್ ವನದಲ್ಲಿ ವಿವಿಧ ಜಾತಿಯ ನೂರಾರು ಔಷಧೀಯ ಸಸ್ಯ , ಗಿಡಮೂಲಿಕೆಗಳನ್ನು ಬೆಳೆಸಲಾಗಿದೆ. ಮನುಷ್ಯನ ಆರೋಗ್ಯ ರಕ್ಷಣೆಯಲ್ಲಿ ಪ್ರಾಮುಖ್ಯತೆ ವಹಿಸುವ ಗಿಡಮೂಲಿಕೆಗಳು ಇಲ್ಲಿದೆ ಎಂದು ಅಧಿಕಾರಿಗಳು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಉದ್ಘಾಟಿಸಿದ 17 ಯೋಜನೆಗಳಲ್ಲಿ ಆರೋಗ್ಯ ವನ ಕೂಡಾ ಒಂದಾಗಿದ್ದು, ಏಕತಾ ಪ್ರತಿಮೆ ಸಮೀಪ ಈ ವನ ನಿರ್ಮಾಣಗೊಂಡಿದೆ. ಈ ಆರೋಗ್ಯ ವನದಲ್ಲಿ ಜನರ ಬದುಕಿನ ಅಂಗವಾಗಿರುವ ಯೋಗ, ಆಯುರ್ವೇದ ಮತ್ತು ಧ್ಯಾನದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುತ್ತದೆ ಹಾಗೂ 380 ಆಯ್ದ ಜಾತಿಗಳ ಐದು ಲಕ್ಷ ಔಷಧೀಯ ಗಿಡಗಳನ್ನು ಬೆಳೆಸಲಾಗಿದೆ ಎಂದು ಪ್ರಕಟಣೆ ವಿವರಿಸಿದೆ.

ಅಷ್ಟೇ ಅಲ್ಲ ಆರೋಗ್ಯ ವನದಲ್ಲಿ ಕಮಲದ ಕೊಳ, ಆಲ್ಫಾ ಗಾರ್ಡನ್, ಯೋಗ ಮತ್ತು ಧ್ಯಾನ ಉದ್ಯಾನ, ಒಳಾಂಗಣ ಸಸ್ಯ ವಿಭಾಗ, ಡಿಜಿಟಲ್ ಮಾಹಿತಿ ಕೇಂದ್ರ, ನೆನಪಿನ ಕಾಣಿಕೆ ಮತ್ತು ಆಯುರ್ವೇದ ಆಹಾರ ಪೂರೈಸುವ ಕೆಫೆಟೇರಿಯಾ ಕೂಡಾ ಇಲ್ಲಿರಲಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ರಾಜ್ಯಪಾಲ ಆಚಾರ್ಯ ದೇವವ್ರತ್ ಉಪಸ್ಥಿತರಿದ್ದರು.