ಬ್ಯಾಡಗಿ: ನಾಡು ನುಡಿ ಜಲ ರಕ್ಷಣೆಗೆ ಪ್ರತಿಯೊಬ್ಬರು ಬದ್ದರಾಗುವ ಮೂಲಕ ಕನ್ನಡ ಭಾಷೆ, ಸಾಹಿತ್ಯ ಉಳಿಸಿ ಬೆಳೆಸಬೇಕಿದೆ. ಭಾಷೆ ಉಳಿಯ ಬೇಕಾದರೆ ನಾವೆಲ್ಲ, ಕನ್ನಡ ಕಲಿಕೆಯ ಜೊತೆ ಮಾತೃ ಭಾಷೆಯಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಶಾಸಕ ವೀರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು. ಪಟ್ಟಣದ ಎಸ್ಜೆಜೆಎಂ ಸರ್ಕಾರಿ ಕ್ರೀಡಾಂಗಣದಲ್ಲಿ ರಾಷ್ಟಿಯ ಹಬ್ಬಗಳ ಆಚರಣೆ ಸಮಿತಿ ಆಶ್ರಯದಲ್ಲಿ ಭಾನುವಾರ ಜರುಗಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಉಳಿಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದೆ. ನಾಡಿನ ನೆಲಜಲ ರಕ್ಷಣೆಯಲ್ಲಿ ಕನ್ನಡಪರ ಸಂಘಟನೆ ಹಾಗೂ ಕನ್ನಡಾಭಿಮಾನಿಗಳ ಪಾತ್ರ ಹಿರಿದಾಗಿದೆ, ನೆಲ, ಜಲ ಹಾಗೂ ಭಾಷಾಭಿಮಾನ ಬೆಳೆಸಿಕೊಂಡು ನಾಡಿಗೆ ನಿಸ್ವಾರ್ಥ ಸೇವೆ ಸಲ್ಲಿಸಲು ಪ್ರತಿಯೊಬ್ಬರು ಬದ್ದರಾಗಬೇಕಿದೆ ಎಂದರು. ಧ್ವಜಾರೋಹಣವನ್ನು ತಹಸೀಲ್ದಾರ ರವಿ ಕೊರವರ ನೆರವೇರಿಸಿದರು. ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಪುರಸಭೆ ಸದಸ್ಯರಾದ ಬಸವರಾಜ ಛತ್ರದ, ರಾಮಣ್ಣ ಕೋಡಿಹಳ್ಳಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜಯಕುಮಾರ, ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಕರವೇ ಅಧ್ಯಕ್ಷ ಮಂಜುನಾಥ ಬೋವಿ ಇತರರು ಉಪಸ್ಥಿತರಿದ್ದರು.