ಕಿತ್ತೂರು: ಪಟ್ಟಣದಲ್ಲಿ ಬಿಜೆಪಿ ಮಂಡಳದ ವತಿಯಿಂದ ಪ್ರಶಿಕ್ಷಣ ವರ್ಗದ ಮೊದಲ ದಿನ ಬುಧವಾರ ಕುಲವಳ್ಳಿ ಗ್ರಾ.ಪಂ ವ್ಯಾಪ್ತಿಯ ಮಾಚಿ ಪ್ಲಾಂಟೇಶನ್ ಪ್ರವಾಸಿ ಮಂದಿರದಲ್ಲಿ ನಡೆಯಿತು. ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು. ದೀಲಿಪ್ ವರ್ಣೆಕರ್ ನಮ್ಮ ವಿಚಾರ ಮತ್ತು ಪರಿವಾರದ ಬಗ್ಗೆ ವಿವರಣೆ ನೀಡಿದರು. ರಾಜು ಚಿಕ್ಕನಗೌಡರ ಕಾರ್ಯಪದ್ದತಿ ಹಾಗೂ ಪಕ್ಷ ಸಂಘಟನೆಯ ಸಂರಚನೆಯಲ್ಲಿ ನಮ್ಮ ಪಾತ್ರ ಎಂಬ ವಿಚಾರವನ್ನು ತಿಳಿಸಿದರು. ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ ರಾಜ್ಯ ಬಿಜೆಪಿ ಸರ್ಕಾರದ ಕಾರ್ಯಸಾಧನೆಗಳ ಬಗ್ಗೆ ವಿವರಿಸಿದರು. ಲೀಲಾ ಟೋಪಣ್ಣವರ ಸಾಮಾಜಿಕ ಜಾಲತಾಣದ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಉಜ್ವಲಾ ಬಡವನಾಚ್ಚೆ ಬಿಜೆಪಿ ಪಕ್ಷದ ಇತಿಹಾಸ ಹಾಗೂ ವಿಕಾಸದ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮಂಡಳ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.