ಶ್ರೀನಗರ: ಬಿಎಸ್ಎಫ್ ಯೋಧರು ಗಸ್ತು ತಿರುಗುವ ವೇಳೆಯಲ್ಲಿ ಜಮ್ಮು-ಕಾಶ್ಮೀರ ಪ್ರದೇಶದಲ್ಲಿದೊಂದು ಸುರಂಗ ಪತ್ತೆಯಾಗಿದೆ. ಸಾಂಬಾ ಜಿಲ್ಲೆಯಲ್ಲಿ ಈ ಸುರಂಗ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಇದನ್ನು ಭಯೋತ್ಪಾದಕರನ್ನು ಭಾರತದೊಳಗೆ ನುಗ್ಗಿಸುವುದಕ್ಕೆ ಬಳಕೆ ಮಾಡಲಾಗುತ್ತಿತ್ತು.

ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ. ಪಾಕಿಸ್ತಾನದ ಕರಾಚಿ ಗುರುತು ಹೊಂದಿರುವ ಮರಳು ಚೀಲಗಳಿಂದ ಸುರಂಗದ ಬಾಯಿಯನ್ನು ಬಲಪಡಿಸಲಾಗಿತ್ತು . ಇದು ಹೊಸದಾಗಿ ಅಗೆದ ಸುರಂಗವಾಗಿದ್ದು, ಇದನ್ನು ಮೊದಲ ಬಾರಿಗೆ ಬಳಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಪಾಕಿಸ್ತಾನ ಭಯೋತ್ಪಾದಕರನ್ನು ಭಾರತದ ಗಡಿಯೊಳಗೆ ನುಗ್ಗಿಸುವುದಕ್ಕಾಗಿ ಸುರಂಗಗಳನ್ನು ಬಳಕೆ ಮಾಡುತ್ತಿದ್ದು, ಆಗಾಗ್ಗೆ ಈ ರೀತಿಯ ಸುರಂಗಗಳು ಪತ್ತೆಯಾಗುತ್ತಿವೆ.