ಕಾಗವಾಡ: ಸ್ವಾತಂತ್ರ, ಬಂದು ದಶಕಗಳೇ ಕಳೆದರೂ ಗಡಿಭಾಗದ ಇನ್ನೂ ಕೆಲ ಗ್ರಾಮಗಳು ಮೂಲಭೂತ ಸೌಕರ್ಯಗಳಿಂತ ವಂಚಿತವಾಗಿವೆ. ಆರೋಗ್ಯ, ಕುಡಿಯುವ ನೀರು ಹಾಗೂ ಬಸ್ ಸೌಕರ್ಯ ಪಡೆಯಲು ಹತ್ತಾರು ಕಿ.ಮೀ ಅಲೆದಾಡುವ ಪರಿಸ್ಥಿತಿ ಈವರೆಗೂ ಜೀವಂತವಾಗಿದ್ದು, ಅಧಿಕಾರಿ ಗಳು ಮಾತ್ರ ತಮಗೆ ಸಂಬಂಧವೇ ಇಲ್ಲದಂತೆ ವರ್ತನೆ ಮಾಡುತ್ತಿರುವುದು ವಿಪರ್ಯಾಸ.
ಇಂದಿಗೂ ಮೂಲಭೂತ ಸೌಲಭ್ಯ ವಂಚಿತ ಕುಗ್ರಾಮ.
ಕುಡಿಯುವ ನೀರಿಗಾಗಿ ಕಿ.ಮೀ ಪ್ರಯಾಣ ಅನಿವಾರ್ಯ.
ಗಡಿಭಾಗ ಮಹಾರಾಷ್ಟ್ರಕ್ಕೆ ಸೇರಲು ಬಿಡಿ ಎನ್ನುತ್ತಿರುವ ಜನತೆ.
ಕಾಗವಾಡ ತಾಲೂಕಿನ ಅರಳಿಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಮ್ಮನಾಳ ಎಂಬ ಪುಟ್ಟ ಗ್ರಾಮದ ಜನ ಈಗಲೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪ್ರಸ್ತುತ ವರ್ಷದ ಮುಂಗಾರು ಮಳೆ ಆಗದ ಹಿನ್ನಲೆಯಲ್ಲಿ ಜನ ಹಾಗೂ ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಬೆಳೆದ ಬೆಳೆ ಮಳೆಯ ಅಭಾವದಿಂದ ಒಣಗಿದ್ದು ಜಾನುವಾರುಗಳು ಮೇವಿಲ್ಲದೆ ಕಂಗಾಲಾಗಿವೆ. ಸಧ್ಯ ಬೊಮ್ಮನಾಳ ಗ್ರಾಮಕ್ಕೆ ಕೇವಲ ಒಂದು ಬಸ್ ಬರುತ್ತಿದ್ದು ಅದಕ್ಕೂ ಸರಿ ಯಾದ ಸಮಯವೂ ಇಲ್ಲ, ಇನ್ನೂ ಜನ ಆಸ್ಪತ್ರೆಗೆ ತೆರಳ ಬೇಕೆಂದರೆ ಹತ್ತಾರು ಕಿ. ಮೀ ದೂರ ಸಂಚರಿಸಬೇಕು. ಹಾಗೆಯೇ ನೀರಿಗಾಗಿ ಮಹಿಳೆಯರು ದೂರದವರೆಗೂ ಬಿಸಿಲಿನಲ್ಲಿ ನಡೆದು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೂ ಈವರೆಗೂ ಸರಕಾರ ಹಾಗೂ ಸ್ಥಳೀಯ ಅಧಿಕಾರಿಗಳಿ ಗಮನಹರಿಸದೇ ಇರುವುದು ದುರದೃಷ್ಟಕರ ಸಂಗತಿ.
ಒಂದು ಕಡೆ ಮಹಾರಾಷ್ಟ್ರ ಗಡಿ ಭಾಗದ ಕರ್ನಾಟಕ ಅಭಿವೃದ್ಧಿ ವಂಚಿತ ಹಳ್ಳಿಗಳನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಇತ್ತ ಕರ್ನಾಟಕ ಸರಕಾರ ತನಗೆ ಯಾವುದು ಸಂಬಂಧ ಇಲ್ಲದಂತೆ ವರ್ತನೆ ಮಾಡುತ್ತಿರುವುದು ವಿಪರ್ಯಾಸ. ಅತ್ತಕಡೆ ಆರೋಗ್ಯ ವಿಮೆಯಂತಹ ಯೋಜನೆ ತರುತ್ತಿದ್ದರೆ, ನಮ್ಮಲ್ಲಿ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅಭಿವೃದ್ಧಿಗೆ ಹಿಡಿದ ಕನ್ನಡಿಯೇ ಸರಿ. ಇನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಇತ್ತ ಕಡೆ ಗಮನ ಹರಿಸಿದರೆ ಒಳಿತು.
ವರದಿಗಾರ : ರಾಹುಲ