ಕೃಷಿ ಭೂಮಿ ನದಿ ಪಾಲು ಕಂಗಾಲಾದ ಬಡಪಾಯಿ ರೈತ

  • Shivaraj Bandigi
  • 14 Jan 2024 , 11:17 PM
  • Belagavi
  • 168

ಅಥಣಿ : ವಿವಿಧ ಬೆಳೆ ಬೆಳೆಯೋ ನದಿ ತೀರದ ಕೃಷಿ ಭೂಮಿ ಅನ್ನದಾತನ ಪಾಲಿಗಂತೂ ಚಿನ್ನದ ಮೊಟ್ಟೆ ಇಡುವ ಕೋಳಿಯೇ ಸರಿ. ಇಂತಹ ಫಲವತ್ತಾದ 4 ಎಕರೆಯಷ್ಟು ಜಮೀನೇ ಮಾಯವಾಗಿದೆ ಅಂದ್ರೆ ನಂಬೋದಕ್ಕೆ ಸಾಧ್ಯಾನಾ..? ನಂಬಲೇಬೇಕು. ಇಂತಹದೊಂದು ಪ್ರಸಂಗ ನಡೀತಿರೋದು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸವದಿ ಹಾಗೂ ಸವದಿ ದರ್ಗಾ ಗ್ರಾಮದ ಬಳಿಯಲ್ಲಿ. 

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕು ವ್ಯಾಪ್ತಿಯಲ್ಲಿ ಇರುವ ಹಿಪ್ಪರಗಿ ಬ್ಯಾರೇಜ್ ಗೆ 22 ಗೇಟ್ ಗಳನ್ನು ಅಳವಡಿಸಲಾಗಿದ್ದು, ಈ ಗೇಟ್ ಗಳನ್ನು ಓಪನ್ ಮಾಡಿ ಆಗಾಗ ನೀರು ಹೊರ ಬಿಟ್ಟ ಸಂದರ್ಭದಲ್ಲೆಲ್ಲ ಭಾರೀ ಪ್ರಮಾಣದಲ್ಲಿ ನೀರು ಸವದಿ ದರ್ಗಾ ಗ್ರಾಮದ ನದಿ ತೀರದ ಜಮೀನನ್ನು ಆವರಸಿಕೊಳ್ಳುತ್ತದೆ.

ಅದರಲ್ಲೂ ಹಿಪ್ಪರಗಿ ಬ್ಯಾರೇಜ್ ನಿಂದ ಒಂದೂವರೆ ಕಿ.ಮೀ ವರೆಗೆ ಫಲವತ್ತಾದ ಜಮೀನು ಪ್ರತಿ ವರ್ಷವೂ ಕೊಚ್ಚಿಕೊಂಡು ಹೋಗುತ್ತಲೇ ಇದೆ. ಸವದಿ ದರ್ಗಾ ಗ್ರಾಮವೊಂದರಲ್ಲಿಯೇ 70ಕ್ಕೂ ಹೆಚ್ಚು ಸರ್ವೆ ನಂಬರ್ ಗಳ ಜಮೀನು ಅಷ್ಟಷ್ಟೇ ಕೊಚ್ಚಿಕೊಂಡು ಹೋಗಿ ಕೊರಕಲು ಉಂಟಾಗುತ್ತಲೇ ಇದೆ. ಹೀಗೆ ಕಳೆದ 2-3 ವರ್ಷಗಳಲ್ಲಿಯೇ 4 ಎಕರೆಗೂ ಹೆಚ್ಚು ಫಲವತ್ತಾದ ಜಮೀನು ಕೃಷ್ಣಾರ್ಪಣವಾಗಿದ್ದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ.

ಬ್ಯಾರೇಜ್ ನಿಂದ ನೀರು ಬಿಡುಗಡೆ ಮಾಡಿದಾಗಲೆಲ್ಲ ಭಾರೀ ಪ್ರಮಾಣದಲ್ಲಿ ಕೃಷಿ ಜಮೀನು ಕೊಚ್ಚಿಕೊಂಡು ಹೋಗುತ್ತಲೇ ಇದ್ದು, ಇದಕ್ಕೊಂದು ಶಾಶ್ವತ ಪರಿಹಾರ ಕೊಡಬೇಕಾಗಿದೆ. ಈಗಾಗಲೇ 28 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಮಣ್ಣಿನ ಸವಕಳಿಯನ್ನು ತಡೆಯಲು ತಡೆಗೋಡೆಯನ್ನು ನಿರ್ಮಾಣ ಮಾಡುವ ಕಾಮಗಾರಿಯು ಪ್ರಗತಿಯಲ್ಲಿದೆ. ಕೇವಲ 500 ಮೀಟರ್ ವರೆಗೆ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದ್ದು, ಇನ್ನೂ 1 ಕಿ.ಮೀ ವರೆಗೆ ತಡೆಗೋಡೆ ನಿರ್ಮಾಣ ಮಾಡಬೇಕೆಂದು ನದಿ ತೀರದಲ್ಲಿ ಕೃಷಿ ಜಮೀನು ಹೊಂದಿದವರ ಒತ್ತಾಯವಾಗಿದೆ.

Read All News