ನಾಡಿನ ಜನರ ಸೇವೆಗೆ ಸದಾ ಸಿದ್ಧ : ಡಾ.ವಿಶ್ವನಾಥ ಪಾಟೀಲ

  • Shivaraj Bandigi
  • 15 Jan 2024 , 3:28 AM
  • Belagavi
  • 512

ಬೈಲಹೊಂಗಲ : ಚುನಾವಣೆಗಳಲ್ಲಿ ಸೋಲು-ಗೆಲವು ಸಹಜವಾಗಿದೆ. ಮತದಾರರ ತೀರ್ಪನ್ನು ಪ್ರೀತಿಯಿಂದ ಸ್ವೀಕರಿಸೋಣ. ಯಾವುದೇ ಕಾರಣಕ್ಕೂ ಎದೆಗುಂದದೆ ಎಲ್ಲ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಹೆಚ್ಚಿನ ಕೆಲಸ ಮಾಡಿ ಮುಂದಿನ ಚುನಾವಣೆಗಳನ್ನು ಎದುರಿಸೋಣ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು. 

ಪಟ್ಟಣದ ವಿದ್ಯಾನಗರದಲ್ಲಿರುವ ಅವರ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಮತ ನೀಡಿದ ಎಲ್ಲ ಮತದಾರ ಬಂಧುಗಳಿಗೆ ಕೃತಜ್ಞತೆ ಅರ್ಪಿಸುವೆ. 

ಪಕ್ಷೇತರನಾಗಿ ಸ್ಪರ್ಧಿಸಿದ್ದರೂ ನನ್ನ ಬೆನ್ನ ಹಿಂದೆ ನಿಂತು ನಿರಂತರ ಹೋರಾಟ ಮಾಡಿ ಸ್ವಾಭಿಮಾನವನ್ನು ಎತ್ತಿ ಹಿಡಿದದ್ದು ಮತ್ತು ನ್ಯಾಯಕ್ಕಾಗಿ ಹೋರಾಟ ನಡೆಸಿದ್ದು ನನಗೆ ಸಮಾಧಾನ ತಂದಿದೆ. ನಾಡಿನ ಜನರು ನನ್ನ ಉಸಿರು ಇದ್ದಹಾಗೆ. ಅವರ ನಿರ್ಣಯಕ್ಕೆ ನಾನು ಚಿರಋಣಿಯಾಗಿದ್ದೇನೆ. ನ್ಯಾಯ ಕೇಳಿ ಬಂದವರಿಗೆ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. 

ನನ್ನ ರಾಜಕೀಯ ಜೀವನದಲ್ಲಿ ಒಂದು ನಯಾ ಪೈಸೆ ಲಂಚ ಪಡೆಯದೆ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ನನ್ನ ಆಡಳಿತಾವಧಿಯಲ್ಲಿ ನಾಡಿನ ಜನರು ಶಾಂತಿ-ಸೌಹಾರ್ದತೆಯಿAದ ದಿನ ಕಳೆದಿರುವುದು ಸಂತಸ ಇದೆ. ನಾನು ಯಾರ ಮೇಲೆಯೂ ದ್ವೇಷ ಸಾಧಿಸುವ ವ್ಯಕ್ತಿ ಅಲ್ಲ. ಪ್ರಾಮಾಣಿಕವಾಗಿ ನಿಜವಾದ ಬಡವರಿಗೆ ಸರಕಾರದ ಯೋಜನೆಗಳನ್ನು ತಲುಪಿಸಲು ಶ್ರಮಿಸಿದ್ದೇನೆ. ಕಷ್ಟ ಅಂದವರಿಗೆಲ್ಲ ಸಹಾಯ-ಸಹಕಾರ ಮಾಡಿದ್ದೇನೆ. ಸ್ವಾಭಿಮಾನದ ಪ್ರಶ್ನೆ ಬಂದಾಗ ನಾಡಿನ ಜನರು ಕೈ ಹಿಡಿಯುತ್ತಾರೆ ಅಂತ ನಂಬಿಕೆ ಇಟ್ಟಿದ್ದೆ. 

ಆದರೆ ಹಣ ಒಂದೇ ಎಲ್ಲದಕ್ಕೂ ಪರಿಹಾರವಲ್ಲ ಎಂಬುವುದನ್ನು ಎಷ್ಟೋ ಕಡೆ ಮತದಾರರು ಸಾಬೀತು ಮಾಡಿದ್ದಾರೆ. ಕೊರೊನಾ ಕಷ್ಟ ಕಾಲದಲ್ಲಿ ನಾನು ನಿಮ್ಮೊಡನೆ ಸೇರಿ ಸೇವೆ ಮಾಡಿದಂತೆ ಮುಂದೆಯೂ ಸೇವೆ ಮಾಡುತ್ತೇನೆ. ಎಲ್ಲರೂ ಧೈರ್ಯದಿಂದ ಇರಬೇಕೆಂದು ಕೇಳಿಕೊಳ್ಳುವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸ-ಕಾರ್ಯಗಳನ್ನು ಮಾಡುತ್ತೇನೆ. ನನ್ನ ನಂಬಿದ ಜನರಿಗೆ ಮೋಸ, ಅನ್ಯಾಯ ಆಗಲು ಬಿಡುವುದಿಲ್ಲ. 

ಅರವಳ್ಳಿ ಗೌಡರ ಮನೆತನ ಇರುವುದೇ ಜನರ ಸೇವೆಗಾಗಿ. ಅನ್ಯಾಯದ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಾಗಿ ನಿಲ್ಲುತ್ತೇನೆ. ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಮುಂದೆ ಬರುವ ಜಿಲ್ಲಾ ಪಂಚಾಯತ, ತಾಲೂಕು ಪಂಚಾತ, ಲೋಕಸಭೆ ಚುನಾವಣೆಗಳನ್ನು ಎದುರಿಸಲು ಸನ್ನದ್ಧರಾಗೋಣ ಎಂದರು. ಯಾವುದೇ ಸಮಾಜಗಳ ಬಗ್ಗೆ ಅಥವಾ ನಾಯಕರಗಳ ಬಗ್ಗೆ ಟೀಕೆ-ಟಿಪ್ಪಣಿಗಳನ್ನು ಮಾಡುವುದು ಬೇಡ. 

ನಮ್ಮ ಹೋರಾಟ ಏನಿದ್ದರೂ ಅನ್ಯಾಯದ ವಿರುದ್ಧ ಇರುತ್ತದೆ ಎಂದರು. ಎಲ್ಲ ರೈತ ಸಂಘಟನೆಗಳು, ನಾಡಿನ ಎಲ್ಲ ಪೂಜ್ಯರುಗಳು, ನಾನಾ ಸಂಘಟನೆಗಳು ಸೇರಿದಂತೆ ಎಲ್ಲ ನನ್ನ ಅಭಿಮಾನಿ ಕಾರ್ಯಕರ್ತರಿಗೆ, ಬಂಧು-ಬಾಂಧವರಿಗೆ, ಸ್ನೇಹಿತರಿಗೆ ಹಾಗೂ ಪರೋಕ್ಷವಾಗಿ, ಅಪರೋಕ್ಷವಾಗಿ ಸಹಾಯ-ಸಹಕಾರ ನೀಡಿದ ಗುರು-ಹಿರಿಯರಿಗೆ ಹಾಗೂ ಸಮಸ್ತರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

Read All News