ಬೆಳಗಾವಿ : ಆಜಾದ್ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಅವರ ಮೇಲೆ ನಡೆದ ಕೊಲೆ ಯತ್ನದ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಶುಕ್ರವಾರ ಭೀಮ್ ಆರ್ಮಿ ಸಂಘಟನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ರವಾನಿಸಿದರು.
ಇತ್ತೀಚೆಗೆ ಸಹರಾನಪುರದ ದೇವಬಂದನಲ್ಲಿ ಮನುವಾದಿ ಚಿಂತನೆಯ ಕೆಲವು ಅಪರಿಚಿತ ದಾಳಿಕೋರರು, ಆಜಾದ್ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಂದ್ರಶೇಖರ ಆಜಾದ್ ಅವರ ಮೇಲೆ ಹತ್ಯೆಯ ದಾಳಿ ನಡೆಸಿದ್ದಾರೆ. ಇದು ಅತ್ಯಂತ ಗಂಭೀರವಾದ ವಿಷಯ. ಅವರ ಮೇಲೆ ಈ ಹಿಂದೆಯೂ ದಾಳಿಗಳು ನಡೆದಿವೆ. ಆದರೆ ಸರಕಾರ ಮಾತ್ರ ಅವರ ಮೇಲಿನ ದಾಳಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಮನವಿಯಲ್ಲಿ ದೂರಿದ್ದಾರೆ.
ಚಂದ್ರಶೇಖರ ಆಜಾದ್ ಅವರು ಬಹುಜನ ಸಮಾಜದ ಜನಪ್ರೀಯ ನಾಯಕರಾಗಿದ್ದು ಅವರ ಮೇಲಿನ ದಾಳಿ ಲಕ್ಷಾಂತರ ಅಭಿಮಾನಿಗಳಿಗೆ ನೋವು ತಂದಿದೆ. ಕೂಡಲೇ ಅವರ ಮೇಲೆ ದಾಳಿ ಮಾಡಿದವರ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ವಿ.ಆರ್.ಮೇತ್ರಿ, ಪಿ.ಡಿ.ವಾಲಪಟ್ಟಿ, ಆರ್.ವಿ.ಸುಣಗಾರ, ಬಾಬಾಸಾಹೇಬ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.