ಅಥಣಿ : ತಾಲೂಕು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ತಾಲೂಕಾಗಿದ್ದು ಇಲ್ಲಿ ಜನರ ಜನಜೀವನವು ಕೃಷಿ ಪ್ರಧಾನ ಉದ್ಯೋಗವಾಗಿದೆ. ಕೃಷ್ಣೆಯು ಜೀವನದಿಯಾಗಿ ಹರಿಯುತ್ತಿದ್ದು ಅಗತ್ಯ ಸಂಪನ್ಮೂಲಗಳಿದ್ದರೂ ಅಭಿವೃದ್ಧಿ ಪಥದಲ್ಲಿ ವೇಗವಾಗಿ ಸಾಗಲು ಸಾಧ್ಯವಾಗದಿರುವುದು ನಮ್ಮಲ್ಲೆರ ಅಸಾಯಕತೆಯನ್ನು ಸಾಂಕೇತಿಕವಾಗಿ ಬಿಂಬಿಸುತ್ತಿದೆ.
ಅಥಣಿ ತಾಲೂಕಿನ ದಕ್ಷಿಣ ಭಾಗವು ಕೃಷ್ಣೆಯ ಆಸರೆಯಿಂದ ಕಬ್ಬು ಕೃಷಿಯಲ್ಲಿ ದಾಪುಗಾಲು ಹಾಕಿದೆ. ಇಲ್ಲೀಯ ವರೆಗೆ ಕೃಷ್ಣಾ ನದಿಯ ನೀರು ಪರಿಣಾಕಾರಿಯಾಗಿ ಬಳಸಿಕೊಳ್ಳದೆ ಇರುವದರ ಪರಿಣಾಮವಾಗಿ ತಾಲೂಕಿನ ಉತ್ತರ ಮತ್ತು ಪೂರ್ವ ಭಾಗಗಳು ಪದೇ ಪದೇ ಬರಗಾಲದಿಂದ ನರಳುತ್ತಿವೆ. ತಾಲೂಕಿನಲ್ಲಿ ಸಾಮಾನ್ಯವಾಗಿ ಬೀಳುವ ಮಳೆಯ ಪ್ರಮಾಣವು ಅತಿ ಕಡಿಮೆ ಇರುವದರಿಂದ ಬರಗಾಲವು ಕೃಷಿಕರ ಮೇಲೆ ತೂಗುಕತ್ತಿಯೆನಿಸಿದ್ದು ಅದರ ಪರಿಣಾಮವಾಗಿ ಈ ಭಾಗದ ಒಟ್ಟಾರೆ ಅಭಿವೃದ್ಧಿಯು ಸಹ ಕುಂಠಿತಗೊಳ್ಳಲು ಒಂದು ಕಾರಣವಾಗಿದೆ.
ತಾಲೂಕಿನ ಉತ್ತರ ಭಾಗದಲ್ಲಿ ಅಗ್ರಾಣಿಹಳ್ಳದಿಂದ ಅವ್ಯಾಹತವಾಗಿ ಉಸುಕು ತಗೆಯಲ್ಪಟ್ಟು ಕಾಮಗಾರಿಗಳಿಗೆ ರವಾನೆಯಾಗುತ್ತಿರುವದು ಸಹ ಒಂದು ಗಂಭೀರ ಸಮಸ್ಯೆಯೆನಿಸಿದೆ.ಇದರಿಂದ ಅಥಣಿ ಜನತೆಗೆ ಬರಗಾಲ,ಪ್ರವಾಹ ಹಂತಹ ನೈಸರ್ಗಿಕ ಪ್ರಕೋಪಗಳ ಅಪಾಯವು ಹೆಚ್ಚಾಗಿದೆ.ಕೆಲವು ಹಿತಾಶಕ್ತಿಗಳು ಹೀಗೆ ಇಡೀ ಜನಜೀವನಕ್ಕೆ ಮಾರಕವೆನಿಸುವಂತೆ ನಿಸರ್ಗದ ಶೋಷಣೆಯಲ್ಲಿ ತೊಡಗಿರುವುದನ್ನು ನಿಲ್ಲಿಸುವುದು ನಮ್ಮ ಅಧಿಕಾರಾಡೂಢರ ಗುರುತರ ಜವಾಬ್ದಾರಿಯಾಗಿದೆ.
ಸಾರಿಗೆ,ಸರಕು ಸಾಮಗ್ರಿಗಳು ಮತ್ತು ಮಾನವಶಕ್ತಿಯ ಜೊತೆಗೆ ಅಗತ್ಯ ಸಂಪನ್ಮೂಲಗಳಿದ್ದರೂ ಸಹ ಅಥಣಿ ಔದ್ಯಮಿಕ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ಮತ್ತೋಂದು ಗಂಭೀರ ಸಮಸ್ಯೆಯಾಗಿದೆ.ಅಥಣಿಯ ಸುತ್ತಲೂ ಪರಂಪರಾಗತ ಗುಡಿ ಕೈಗಾರಿಕೆಯಾಗಿರುವ ಚರ್ಮೋದ್ಯೋಗವನ್ನು ಅಭಿವೃದ್ಧಿ ಪಡಿಸುವ ದಿಶೆಯಲ್ಲಿ ಪ್ರಗತಿ ಸಾಧಿಸಲಾಗಿದೆ ಇನ್ನಷ್ಟು ಸಣ್ಣ ಕೈಗಾರಿಕೆಗಳನ್ನು ಸಂರಕ್ಷಿಸಿ ವಿಕಾಸಕೊಳಿಸುವುದು ಅತ್ಯವಶ್ಯಕವಾಗಿದೆ. ಜೊತೆಗೆ ಕೃಷಿ,ನೀರಾವರಿ ಮತ್ತು ಅವುಗಳ ಮೇಲೆ ಆಧಾರಿತ ಜಾಲವನ್ನು ಹೆಣಿಯುವುದು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅವಶ್ಯಕವಾಗಿದೆ.
ಅಥಣಿ ಜಿಲ್ಲಾ ಕೇಂದ್ರವಾಗಬೇಕು ಈ ನಿಟ್ಟಿನಲ್ಲಿ ಹಿರಿಯರ ಬೆಂಬಲ,ಹೋರಾಟಗಾರರ ಸಹಕಾರ,ರಾಜಕಾರಣಿಗಳ ಸದಾಶಯ,ಜನಪ್ರತಿನಿಧಿಗಳ ಇಚ್ಛಾಶಕ್ತಿ ಒಗ್ಗೂಡಬೇಕು ಅಥಣಿ ಅಭಿವೃದ್ಧಿ ವಿಷಯ ಬಂದಾಗ ಎಲ್ಲ ಎಲ್ಲವೂ ಬದಿಗಿಡಬೇಕು,ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೆರಸಬಾರದು ಗಡಿನಾಡಿನ ಸರ್ವತೋಮುಖ ಅಭಿವೃದ್ಧಿಯಾಬೇಕು.
ಎಲ್ಲರೂ ಈ ದಿಶೆಯಲ್ಲಿ ಕಾರ್ಯೋನುಮುಖವಾಗಬೇಕಾಗಿದೆ ಅಥಣಿ ಜಿಲ್ಲಾ ಹೋರಾಟಗಾರರ ಸಂಘಟನೆಯ ಪ್ರಾಮಾಣಿಕ ಪ್ರಯತ್ನಗಳು ಶೀಘ್ರದಲ್ಲಿ ಫಲಕಾರಿಯಾಗಲಿ ಎಂಬ ಆಶಯ ವ್ಯಕ್ತ ಪಡಿಸುವೆ.