ಅಥಣಿ : ನಾವು ಯಾರೂ ಇಲ್ಲಿ ಕೈಗೆ ಬಳೆ ಹಾಕಿಲ್ಲ, ಎಲ್ಲರೂ ಗಂಡಸರಿದ್ದಿವಿ, ನೆಲ, ಜಲ ವಿಷಯದಲ್ಲಿ ಬೆಳಗಾವಿ ರಾಜಕಾರಣಿಗಳು ನಾವೆಲ್ಲರೂ ಒಂದೇ, ಎಂಇಎಸ್ ಈ ತರಹದ ಪುಂಡಾಟಿಕೆಯನ್ನು ಬಿಡಬೇಕು ಎಂದು ಅಥಣಿಯಲ್ಲಿ ಲಕ್ಷ್ಮಣ್ ಸವದಿ ಎಂಇಎಸ್ ಕಾರ್ಯಕರ್ತರಿಗೆ ಎಚ್ಚರಿಕೆ ರವಾನೆ ಮಾಡಿದರು.
ಇಂದು ತಾಲೂಕಿನ ನದಿ ಇಂಗಳಗಾವಿ ಗ್ರಾಮದಲ್ಲಿ ರೂ 496 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾಧ್ಯಮದವರ ಜೊತೆ ಮಾತನಾಡುತ್ತಾ ಗಡಿ ಕ್ಯಾತೆ ತೆಗೆಯುವುದರಿಂದ ಗಡಿ ಭಾಗದ ಜನರಿಗೆ ಅನಾನುಕೂಲವಾಗುತ್ತೆ, ಅವರ ದೈನಂದಿನ ವ್ಯಾಪಾರ ವಹಿವಾಟಿಗೆ, ಅನೇಕ ಆಸ್ಪತ್ರೆಗೆ ಹೋಗುವಂತವರಿಗೆ, ಹಾಗೂ ಕರ್ನಾಟಕದಲ್ಲಿ ಬೆಳೆದಿರುವ ದವಸ ಧಾನ್ಯಗಳನ್ನ ಮಹಾರಾಷ್ಟ್ರದ ಮಾರಕಟ್ಟೆಗೆ ಒಯ್ಯದಿದ್ದರೆ ಮಹಾರಾಷ್ಟ್ರದವರಿಗೆ ಹಾನಿಯಾಗುತ್ತೆ ಈ ಕುರಿತು ಮಹಾರಾಷ್ಟ್ರ ಸರ್ಕಾರ ಮುತುವರ್ಜಿ ವಹಿಸಿ ಅಲ್ಲಿರುವ ಮುಖಂಡರನ್ನ ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಬೇಕು.
ಸತ್ತ ಹೆಣವನ್ನು ಜೀವಂತ ಮಾಡಲು, ಮಹಾರಾಷ್ಟ್ರ ಹಾಗೂ ಕೆಲವರು ಬೆಳಗಾವಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಎಂಇಎಸ್ ಎಂಬುದು ಬೆಳಗಾವಿಯಲ್ಲಿ ಸತ್ತು ಹೋಗಿದೆ. ಅಲ್ಲಿನ ಸಿಎಂ ಅವರನ್ನು ಹಿಡಿತದಲ್ಲಿ ಇಟ್ಟುಕೊಂಡು ಉಭಯ ರಾಜ್ಯದಲ್ಲಿ ಸಮನ್ವಯ ಸಾಧಿಸಬೇಕು, ಇಲ್ಲವಾದರೆ ನಾವು ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.