ಬೆಂಗಳೂರು: 'ನಮ್ಮ ಸರ್ಕಾರ ಕೋಮು-ಗಲಭೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಯಾರೇ ಕೋಮು ಗಲಭೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬೆಳಗಾವಿ ನಗರದ ಅಳ್ವಾನ್ ಗಲ್ಲಿಯಲ್ಲಿ ಮಕ್ಕಳು ಕ್ರಿಕೆಟ್ ಆಟ ಆಡುವಾಗ ಆರಂಭವಾದ ಜಗಳ ದೊಡ್ಡವರ ಮಟ್ಟಿಗೆ ವಿಕೋಪಕ್ಕೆ ಬೆಳೆದು ಎರಡು ಕೋಮಿನ ಮಧ್ಯೆ ಗುಂಪು ಘರ್ಷಣೆಯಾಗಿ ಕಲ್ಲು ತೂರಾಟ ಮಾಡಲಾಗಿದೆ. ಈ ಗಲಾಟೆಯಲ್ಲಿ ಸಂಬಂಧ ಶಹಾಪುರ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿದೆ ಎಂದರು.
ಕಾನೂನು ಕೈಗೆತ್ತಿಕೊಳ್ಳದಿರಿ: ಬೆಳಗಾವಿ ನಗರದ ಅಳ್ವಾನ್ ಗಲ್ಲಿಯಲ್ಲಿ ನಡೆದ ಗುಂಪು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಠಾಣೆಯಲ್ಲಿ ಈಗಾಗಲೇ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಸಾರ್ವಜನಿಕರು ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಮನವಿ ಮಾಡಿದ್ದಾರೆ.
ಯಾವುದೇ ಪ್ರದೇಶದಲ್ಲಿ ಕಾನೂನುಬಾಹಿರ ಕೃತ್ಯಗಳು ನಡೆದಲ್ಲಿ ಆ ಕುರಿತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕೆ ವಿನಹ ಯಾರೇ ಆಗಲಿ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಬೆಳಗಾವಿಯ ಶಾಂತಿ ಪರಿಸರದಲ್ಲಿ ಅನ್ಯ ವ್ಯಕ್ತಿಗಳಿಂದ ಕೋಮುಗಲಭೆ ಹುಟ್ಟು ಹಾಕುವ ಪ್ರಯತ್ನ ನಡೆಯುತ್ತಿದೆ. ಅಲ್ಲದೇ ಜಾತಿ ಬಣ್ಣ ಹಚ್ಚುವ ಕೆಲಸ ನಡೆಯುತ್ತಿದೆ. ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡೆದೆ ಕೋಮು ಗಲಭೆ ಸಷ್ಟಿಸುವರ ಮಾತಿಗೆ ಕಿವಿಗೊಡದೇ ಬೆಳಗಾವಿ ನಗರದಲ್ಲಿ ಶಾಂತಿಯನ್ನು ಕಾಪಾಡಬೇಕೆಂದು ಸಾರ್ವಜನಿಕರಲ್ಲಿ ಸಚಿವರು ವಿನಂತಿಸಿದ್ದಾರೆ.