ಬೆಳಗಾವಿ
ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡವರಿಗೆ ಸಹಾಯ ಮಾಡುವುದನ್ನು ಭಾರತೀಯ ಜನತಾ ಪಾರ್ಟಿಯವರಿಗೆ ಸಹಿಸಲು ಆಗುತ್ತಿಲ್ಲ. ಅವರಿಗೆ ಏನಿದ್ದರೂ ಶ್ರೀಮಂತರಿಗೆ ಮಾತ್ರ ಸಹಾಯ ಮಾಡುವ ರೂಢಿ. ಹಾಗಾಗಿ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ. ಅಂತವರಿಂದ ಬಡವರ ಉದ್ದಾರ ಸಾಧ್ಯವಾ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಬದ್ಧತೆ ಹೊಂದಿರುವ ಪಕ್ಷ. ಬಿಜೆಪಿಯವರಂತೆ ನಾವು ಚುನಾವಣೆ ಮೊದಲು ಆಸ್ವಾಸನೆ ನೀಡಿ ಗೆದ್ದ ನಂತರ ಜನರಿಗೆ ಮೋಸ ಮಾಡಲಿಲ್ಲ. ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ. ಗ್ಯಾರಂಟಿ ಯೋಜನೆಗಳು ಯಾವತ್ತೂ ನಿಲ್ಲುವುದಿಲ್ಲ. ನಮ್ಮ ಸರಕಾರಕ್ಕೆ ಶಕ್ತಿ ತುಂಬಲು ಲೋಕಸಭಾ ಚುನಾವಣೆಯಲ್ಲಿ ಹಸ್ತದ ಗುರುತಿಗೆ ಮತ ನೀಡಿ ಎಂದು ವಿನಂತಿಸಿದರು.
ದಿಂಬು, ಹಾಸಿಗೆ ತಂದಿಟ್ಟು, ಬಾಡಿಗೆ ಮನೆ ಮಾಡಿರುವ ಶೆಟ್ಟರ ಅವರಿಗೆ ಬೆಳಗಾವಿ ಜನರ ಮೇಲೆ ವಿಶ್ವಾಸ ಇಲ್ಲ. ಮನೆ, ವ್ಯವಹಾರ, ಕುಟುಂಬ ಎಲ್ಲವನ್ನೂ ಹುಬ್ಬಳ್ಳಿಯಲ್ಲಿ ಹೊಂದಿರುವ ಅವರೆಂದೂ ಬೆಳಗಾವಿಗರಾಗಲು ಸಾಧ್ಯವೇ ಇಲ್ಲ. ಅವರುಹೇಳುತ್ತಿರುವುದೆಲ್ಲ ಜನರಿಗೆ ಮಂಕು ಬೂದಿ ಎರಚುವ ಮಾತುಗಳು ಎಂದು ಹೆಬ್ಬಾಳಕರ್ ಹೇಳಿದರು.
ರೈತರ ಮನೆಯಲ್ಲಿಜನಿಸಿದ ನಿಮ್ಮ ಮನೆಮಗಳು ರಾಜ್ಯದ ಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನಿಮಗೆಲ್ಲ ಗೃಹ ಲಕ್ಷ್ಮೀ ಯೋಜನೆ ಮೂಲಕ ತಿಂಗಳಿಗೆ 2 ಸಾವಿರ ರೂ. ಕೊಡುವ ಮಹತ್ವದ ಖಾತೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನನಗೆ, ನಮ್ಮ ಸರಕಾರಕ್ಕೆ ಇನ್ನಷ್ಟು ಶಕ್ತಿ ತುಂಬಿದರೆ ನಾವೆಲ್ಲ ಸೇರಿ ನಿಮ್ಮ ಭಾಗದ ಅಭಿವೃದ್ಧಿ ಮಾಡಲು ಅವಕಾಶವಾಗುತ್ತದೆ ಎಂದು ಅವರು ತಿಳಿಸಿದರು.
ಶಾಸಕ ರಾಜು ಸೇಠ್ ಮಾತನಾಡಿ, ಈ ಹಿಂದೆ ಬೆಳಗಾವಿ ಉತ್ತರ ಶಾಸಕರಾಗಿದ್ದ ಬಿಜೆಪಿಯವರು ಏನೇನೂ ಅಭಿವೃದ್ಧಿ ಮಾಡಿಲ್ಲ. ಈಗ ನಾನು ಶಾಸಕನಾದ ನಂತರ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇನೆ. ಮುಂದೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಅವರು ಆಯ್ಕೆಯಾದರೆ ನಾವೆಲ್ಲರೂ ಸೇರಿ ಬೆಳಗಾವಿಗೆ ಇನ್ನಷ್ಟು ಯೋಜನೆ ತರುತ್ತೇವೆ ಎಂದರು. ನಾವು ಬಿಜೆಪಿಯವರಂತೆ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ ಎಂದೂ ಅವರು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್, ಬೆಳಗಾವಿ ಮಗನಾಗಿ, ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುವೆ. ನಮಗೊಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಸ್ಥಳೀಯ ಮುಖಂಡರಾದ ಪರಶುರಾಮ ವಂಟಮುರಿ, ಮಹೇಶ್ ಶೀಗೆಹಳ್ಳಿ, ಯಲ್ಲಪ್ಪ ಕುರಬರ, ಸುಧೀರ್ ಗಡ್ಡಿ, ಬಾವಕಣ್ಣ ಬಂಗ್ಯಾಗೊಳ, ಭೈರಗೌಡ ಪಾಟೀಲ, ಬಾಬು ಟ್ಯಾನಗಿ, ನಾಗರಾಜ ಮೇಸಿ, ಬಸವರಾಜ ಬಡಕನ್ನವರ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.