ತಾಲೂಕಿನಾದ್ಯಂತ ಚುಟುಕುಹಬ್ಬ ಸಂತಸದ ಸಂಗತಿ : ಡಾ ಮಹಾಂತೇಶ ಉಕ್ಕಲಿ

  • shivaraj bandigi
  • 22 Feb 2024 , 5:49 PM
  • Belagavi
  • 426

ಅಥಣಿ : ತಾಲೂಕಿನ‌ ಪ್ರತಿಯೊಂದು ಶಾಲೆಗಳಿಗೆ ತೆರಳಿ ಚುಟುಕುಗೋಷ್ಠಿ ಆಯೋಜಿಸುವ ಮೂಲಕ ನೂತನ ಕವಿಗಳನ್ನು ಗುರುತಿಸುತ್ತಿರುವ ಆಯೋಜಕರ ಕಾರ್ಯ ಶ್ಲಾಘನೀಯ, ಈ ಮೂಲಕ ತಾಲೂಕಿನಾದ್ಯಂತ ಚುಟುಕುಹಬ್ಬ ಮಾಡುತ್ತಿರುವುದು ಸಂತಸದ ಸಂಗತಿ ಎಂದು ಹಿರಿಯ ಸಾಹಿತಿ ಡಾ ಮಹಾಂತೇಶ ಉಕ್ಕಲಿ ಅವರು ಹೇಳಿದರು.

ಅವರು ತಾಲೂಕಿನ‌ ಕಿರಣಗಿ ಗ್ರಾಮದಲ್ಲಿ ಚುಟುಕು ಸಾಹಿತ್ಯ ಪರಿಷತ್ ಹಾಗೂ ಅಥಣಿ ತಾಲೂಕಾ ಪತ್ರಕರ್ತರ ಸಂಘದ ಸಹಯೋಗದಲ್ಲಿ ಜರುಗಿದ 'ಶಾಲೆಗೊಂದು ಚುಟುಕುಗೋಷ್ಠಿ' ಕಾರ್ಯಕ್ರಮದಲ್ಲಿ ಮಾತನಾಡಿ ನೂತನ ಕವಿಗಳನ್ನು ಹುಟ್ಟುಹಾಕುವ ಪ್ರಯತ್ನ ಮಾಡಿ ಚುಟುಕು‌ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಆಯೋಜಕರ ಪ್ರಯತ್ನ ಅಭಿನಂದನಾರ್ಹವಾದದ್ದು ಎಂದರು.

ಯೋಗ ಗುರು ಎಸ್ ಕೆ ಹೊಳೆಪ್ಪನ್ನವರ ಅವರು ಮಾತನಾಡಿ ಪ್ರತಿಯೊಂದು ವಿದ್ಯಾರ್ಥಿಗಳು ಸಾಹಿತ್ಯದ ಆಸಕ್ತಿ‌ ಬೆಳೆಸಿಕೊಂಡು ಮುಂಬರುವ ದಿನಮಾನದಲ್ಲಿ ಹೊಸ ಹೊಸ ಕವಿತೆಗಳನ್ನು ರಚನೆ ಮಾಡಬೇಕು, ಈ ಮೂಲಕ ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಬೇಕು ಎಂದರು.

ಅನಂತರ ಚುಟುಕು ಸಾಹಿತ್ಯ ಪರಿಷತ್ ಅಥಣಿ ಘಟಕ‌ ಅಧ್ಯಕ್ಷ ಡಾ ಆರ್ ಎಸ್ ದೊಡ್ಡನಿಂಗಪ್ಪಗೋಳ, ಶಿಕ್ಷಕ ವಿಕ್ರಮ ಮೋಘಮೋರೆ, ಅಥಣಿ ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ ಬಡಕಂಬಿ, ಚುಟುಕು ಸಾಹಿತ್ಯ ಪರಿಷತ್ ಕಾರ್ಯದರ್ಶಿ ಶಶಿಧರ ಬರ್ಲಿ ಅವರು ಮಾತನಾಡಿ ಯುವ ಕವಿಗಳಿಗೆ ಚುಟುಕು ಸಾಹಿತ್ಯ ಬಗ್ಗೆ ಮಾರ್ಗದರ್ಶನ ಮಾಡಿದರು.

ಈ ವೇಳೆ ಜಯ ಕರ್ನಾಟಕ‌ ಸಂಘಟನೆಯ ಆಕಾಶ ನಂದಗಾಂವ, ಶಿಕ್ಷಕ ಅಶೋಕ ಡಾಬೋಳಿ, ಚೇತನಕುಮಾರ ಮಾದರ, ಸುನೀಲ ಮಂಗಸೂಳಿ, ಶ್ರೀಕಾಂತ ಸೂರ್ಯವಂಶಿ, ಪತ್ರಕರ್ತರಾದ ಲಕ್ಷ್ಮಣ ಕೋಳಿ, ಸಿದ್ದಾರೂಢ‌ ಬಣ್ಣದ, ಅಬ್ಬಾಸಲಿ ಮುಲ್ಲಾ, ಸುನೀಲ ಮಂಗಸೂಳಿ, ಬಸವರಾಜ ನಂದಗಾಂವ, ಚೇತನ ಸನದಿ, ಗಂಗಾಧರ ತುರಾಯಿ ಇದ್ದರು, ಸುಮಾರು 59 ಜನ ಕವಿಗಳು ಭಾಗವಹಿಸಿದ್ದರು. ಇದರಲ್ಲಿ ಲಕ್ಷ್ಮಣ ಗುರವ ಪ್ರಥಮ, ರೋಹಿಣಿ ಮಡಿವಾಳ ದ್ವಿತೀಯ, ಸಂಗಮೇಶ ಗುರವ ತೃತೀಯ, ದ್ರಾಕ್ಷಾಯಿಣಿ ಮೆಂಡಿಗೇರಿ ಚತುರ್ಥ, ಸರ್ವೇಶ ಗುರವ ಪಂಚಮ, ಸಂಗಮೇಶ ಮಡಿವಾಳ ಹಾಗೂ ಭಾರತಿ ಬಡಿಗೇರ ಸಮಾಧಾನಕರ ಬಹುಮಾನ ಪಡೆದರು.

Read All News