ಬಳ್ಳಾರಿ:ಬಳ್ಳಾರಿ ಜಿಲ್ಲೆಗೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ನೀಡಿರುವ ಕೊಡುಗೆ ಶೂನ್ಯ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್ಪಿ) ಯುವ ಘಟಕದ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ಆರೋಪಿಸಿದ್ದಾರೆ.
ಹರಿಶ್ಚಂದ್ರರ ಅಭಿವೃದ್ಧಿ ಇತಿಹಾಸ ಇಡೀ ಬಳ್ಳಾರಿ ಜಿಲ್ಲೆಯ ಜನತೆಗೆ ಗೊತ್ತಿದೆ. ಜನಾರ್ದನ ರೆಡ್ಡಿ ಅವರ ಆಡಳಿತದ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಗೆ ಸಿಕ್ಕಷ್ಟು ಅನುದಾನ ಬೇರೆ ಯಾರ ಅವಧಿಯಲ್ಲೂ ಸಿಕ್ಕಿಲ್ಲ. ಆ ಸಮಯದಲ್ಲಿ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳನ್ನೇ ಕಾಂಗ್ರೆಸ್ ಇನ್ನೂ ರಿಬ್ಬನ್ ಕತ್ತರಿಸಿ ಉದ್ಘಾಟಿಸುತ್ತಿದೆ. ಕಾಂಗ್ರೇಸ್ ಪಕ್ಷ ಕತ್ತಲಲ್ಲಿಟ್ಟಿದ್ದ ಬಳ್ಳಾರಿ ಜಿಲ್ಲೆಗೆ ಅಭಿವೃದ್ಧಿಯ ಬೆಳಕು ನೀಡಿದವರೇ ಜನಾರ್ದನ ರೆಡ್ಡಿ. ಇದು ಬಳ್ಳಾರಿಯ ಮಹಾ ಜನತೆಗೆ ಗೊತ್ತಿರುವ ಸಾರ್ವಜನಿಕ ಸತ್ಯ ಎಂದು ಹೇಳಿದರು.
ಬಳ್ಳಾರಿ ನಗರ ಕಾಂಗ್ರೆಸ್ ಶಾಸಕರ ಈ ಕುತಂತ್ರ,ದ್ವೇಷ,ಅನಾಗರಿಕ,ಅಸಭ್ಯ,ದರ್ಪ,ಅಹಂಕಾರದ ರಾಜಕಾರಣ ಅವರ ಮನೆತನದ ಸಂಸ್ಕಾರ ಎತ್ತಿ ತೋರಿಸುತ್ತದೆ. ಬಳ್ಳಾರಿ ಮಹಾನಗರದ ಸ್ವಾಭಿಮಾನಿ ಜನತೆಯೇ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.