ಬೆಳಗಾವಿ : ರಾಜ್ಯದ ಪ್ರತಿಷ್ಠಿತ ವೀರಶೈವ ಲಿಂಗಾಯತ ಮಠಗಳಲ್ಲಿ ಒಂದಾದ ಹುಕ್ಕೇರಿ ಹಿರೇಮಠ ತನ್ನ ಸಾಮಾಜಿಕ ಕಳಕಳಿ ಹಾಗೂ ಬದ್ಧತೆಯಿಂದ ಭಕ್ತರ ಪಾಲಿನ ಅಚ್ಚುಮೆಚ್ಚಿನ ಆಸರೆಯಾಗಿದೆ. ಕನ್ನಡ ಕಟ್ಟುವ ಕಾಯಕದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಕೈ ಯಾವತ್ತೂ ಮುಂದೆ. ಅದರಂತೆಯೇ ನವೆಂಬರ್ 1 ರಂದು ಬೆಳಗಾವಿಯಲ್ಲಿ ನಡೆಯುವ ಅದ್ದೂರಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಬರುವವರಿಗೆ ಶ್ರೀಮಠದಿಂದ ಹೋಳಿಗೆ ಪ್ರಸಾದ ಸಿಗಲಿದೆ.
ನಗರದ ಲಕ್ಷ್ಮಿ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ವತಿಯಿಂದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಇದೇ ನವಂಬರ 1 ರಂದು ನಡೆಯುವ ರಾಜ್ಯೋತ್ಸವದ ಸಂದರ್ಭದಲ್ಲಿ ಪಾಲ್ಗೊಂಡ ಸಮಸ್ತ ಕನ್ನಡಿಗರಿಗೆ ಹೋಳಿಗೆಯ ಊಟವನ್ನು ಮಾಡಿಸಲು ಸನ್ನದ್ದರಾಗಿದ್ದಾರೆ. ಸರದಾರ ಕ್ರೀಡಾಂಗಣದಲ್ಲಿ ಹೋಳಿಗೆ ಊಟದ ವ್ಯವಸ್ಥೆಯನ್ನ ಮಾಡಲಾಗಿದೆ. 150 ಕ್ಕೂ ಅಧಿಕ ಹೆಣ್ಣು ಮಕ್ಕಳು ಹೋಳಿಗೆ ಸಿದ್ಧತೆಗೆ ಆಗಮಿಸಲಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಹುಕ್ಕೇರಿ ಹಿರೇಮಠ ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಜೊತೆಗೆ ಬೆಳಗಾವಿಯಲ್ಲಿ ನಡೆಯುವ ಅದ್ದೂರಿ ಕನ್ನಡ ರಾಜ್ಯೋತ್ಸವದಲ್ಲಿ ದಾಸೋಹ ವ್ಯವಸ್ಥೆ ಮಾಡುವ ಮೂಲಕ ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ ಸಾಹಿತಿಕವಾಗಿ ಈ ನಾಡಿನ ಸೇವೆಗೆ ಇವರು ಮುಂದಾಗಿದ್ದಾರೆ. ಅದರಂತೆ ಈ ಬಾರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಮತ್ತೊಮ್ಮೆ ಕನ್ನಡ ಮನಸ್ಸುಗಳ ಹೊಟ್ಟೆ ಸಿಹಿ ಮಾಡಲು ಹೋಳಿಗೆ ಊಟಕ್ಕೆ ಸಜ್ಜಾಗಿದೆ ಕುಂದಾನಗರಿ.