ಚಿಕ್ಕೋಡಿ : ಸತತವಾಗಿ ಸುರಿಯುತ್ತಿರುವ ಮಳೆ, ಮಹಾರಾಷ್ಟ್ರ ರಾಜ್ಯದಿಂದ ಬಿಡಲಾಗುತ್ತಿರುವ ನೀರಿನ ರಭಸಕ್ಕೆ ಚಿಕ್ಕೋಡಿ ಉಪವಿಭಾಗದ ಬಹುತೇಕ ಸೇತುವೆಗಳ ಜಲಾವೃತವಾಗಿವೆ. ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಇದ್ದ ಬಂದ ಬೆಳೆ ಎಲ್ಲಾ ನಾಶವಾಗಿವೆ.
ಅಲ್ಲದೆ ನದಿಪಾತ್ರದ ಜಮೀನುಗಳಲ್ಲಿ ಸಂಗ್ರಹವಾದ ನೀರಿನಲ್ಲಿ ಮಹಾಮಳೆಗೆ ವಿದ್ಯುತ್ ಕಂಬಗಳು ಕೂಡಾ ಅಲ್ಲಲ್ಲಿ ನೆಲಕಚ್ಚಿದ್ದು, ಚಿಕ್ಕೋಡಿ - ಅಂಕಲಿ ಮಧ್ಯದಲ್ಲಿ ಇರುವ ಜಮೀನಿನಲ್ಲಿ ವಿದ್ಯುತ್ ಕಂಬದಲ್ಲಿರುವ ವಿದ್ಯುತ್ ತಂತಿಗಳು ಕೂಡಾ ನೀರಿನಲ್ಲಿ ತೇಲುತ್ತಿವೆ. ಇಂತಹ ತಂತಿಗಳಿಂದ ವಿದ್ಯುತ್ ಪ್ರಸರಣವಾಗುತ್ತಿದ್ದು, ಅಪಾಯ ಮಟ್ಟ ಮಿತಿ ಮೀರಿದೆ. ಕೂಡಲೆ ಜಿಲ್ಲಾಡಳಿತ ಅನಾಹುತ ಸಂಭವಿಸುವ ಮುನ್ನ ಎಚ್ಚರಗೊಂಡು ಅಂತಹ ತಂತಿಗಳಿಂದ ವಿದ್ಯುತ್ ಪ್ರಸರಿಸದಂತೆ ಜಾಗೃತ ವಹಿಸಬೇಕಾಗಿದೆ.