ರಾಮದುರ್ಗ:ಜಿಲ್ಲೆಯಲ್ಲಿ ನೆರೆಯ ಹಾವಳಿಯಿಂದ ರೈತರು, ಕಾರ್ಮಿಕರು, ಮನೆ ಕಳೆದುಕೊಂಡಿರುವ ಸಂತ್ರಸ್ತರಾಗಿರುವ ಜನ ಕಂಗಾಲಾಗಿದ್ದಾರೆ. ಈ ನಿಟ್ಟಿನಲ್ಲಿ ಆಮ್ ಆದ್ಮಿ ವತಿಯಿಂದ ಶನಿವಾರ ರೈತ ಹಿತರಕ್ಷಣಾ ಅಭಿಯಾನದ ಅಡಿಯಲ್ಲಿ ನೆರೆ ಹಾವಳಿಯ ವರದಿಯನ್ನು ಸಂತ್ರಸ್ತರಿಂದಲೇ ತುಂಬಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸುವ ಕಾರ್ಯ ಮಾಡಿದೆ.
ರಾಮದುರ್ಗದಲ್ಲಿ ರೈತ ಹಿತರಕ್ಷಣಾ ಅಭಿಯಾನ ನಡೆಸಿದ ಆಮ್ ಆದ್ಮಿಗೆ ಜನರು ಸ್ಪಂದನೆ ನೀಡಿದ್ದಾರೆ. ಈಗಾಗಲೇ ಕಳೆದ 2019ರಲ್ಲಿ ಬಂದ ನೆರೆಯಲ್ಲಿ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಸರಕಾರ ಸೂರು ಕಲ್ಪಿಸಿಕೊಡುವಲ್ಲಿ ವಿಫಲವಾಗಿದೆ. ಅಲ್ಲದೆ, ಜಾನುವಾರುಗಳು ಮೃತಪಟ್ಟಿದ್ದರೂ ಅವುಗಳಿಗೆ ಪರಿಹಾರ ಕೊಡುವಲ್ಲಿಯೂ ಸಹ ಸರಕಾರ ನಿರ್ಲಕ್ಷ್ಯ ವಹಿಸಿತ್ತು. ಅಷ್ಟೆ ಅಲ್ಲದೆ, ಮತ್ತೆ ನೆರೆ ಹಾವಳಿ ಬಂದು ಗಾಯದ ಮೇಲೆ ಬರೆ ಹಾಕಿದೆ. ಸರಕಾರ ಮಾತ್ರ ಪರಿಹಾರ ನೀಡಲು ಮುಂದಾಗದೆ ಇರುವುದಕ್ಕೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.
ಸಂತ್ರಸ್ತರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆರೆ ಹಾನಿಯ ಅರ್ಜಿ ತುಂಬಿಸಿಕೊಂಡು ಮಾತನಾಡಿದ ಆಮ್ ಆದ್ಮಿ ಉತ್ತರ ವಲಯದ ಉಸ್ತುವಾರಿ ರಾಜಕುಮಾರ ಟೋಪಣ್ಣವರ, ಅತಿವೃಷ್ಟಿಯಿಂದ ರೈತರು, ಕಾರ್ಮಿಕರು, ಬಡ ಜನರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ರಾಜ್ಯದಲ್ಲಿರುವ ಬಿಜೆಪಿ ಸರಕಾರ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ತಮ್ಮ ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿ ಹಾಗೂ ಸಚಿವರುಗಳು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರಲು ಭಯ ಪಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವ ಬಿಜೆಪಿ ಸರಕಾರದ ಮೇಲೆ ಜನರಿಗೆ ಯಾವುದೇ ನಂಬಿಕೆ ಇಲ್ಲ. ಸಂತ್ರಸ್ತರು ಅನುಭವಿಸುತ್ತಿರುವ ಬೆಳೆ ಹಾನಿ, ಆಸ್ತಿ ಹಾನಿ ಹಾಗೂ ಜಾನುವಾರುಗಳ ನಷ್ಟದ ವಿವರನ್ನು ಕೇಂದ್ರ ಸರಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಕೊಡಿಸುವ ಕಾರ್ಯ ಆಮ್ ಆದ್ಮಿ ಮಾಡಲಿದೆ ಎಂದು ಟೋಪಣ್ಣವರ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಜಿಲ್ಲಾಧ್ಯಕ್ಷ ಶಂಕರ ಹೆಗಡೆ, ರಾಮದುರ್ಗ ತಾಲೂಕಾ ಅಧ್ಯಕ್ಷ ಮಲ್ಲಿಕಜಾನ್ ನದಾಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.