ಚಿಕ್ಕೋಡಿ : ಪಶ್ಚಿಮ ಘಟ್ಟ, ಮಹಾರಾಷ್ಟ್ರ ಭಾಗದಲ್ಲಿ ಮುಂದುವರೆದ ಭಾರಿ ಮಳೆಯಿಂದಾಗಿ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಮತ್ತೆ ಪ್ರವಾಹದ ಆತಂಕ ನಿರ್ಮಾಣವಾಗಿದೆ.
ಅಪಾಯದ ಮಟ್ಟ ಮೀರಿ ವೇದಗಂಗಾ, ದೂದಗಂಗಾ ನದಿಗಳು ಹರಿಯುತ್ತಿದ್ದು, ಒಂದು ತಿಂಗಳಲ್ಲಿ ಮೂರನೇಯ ಬಾರಿಗೆ ಆರು ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ.
ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಅಕ್ಕೋಳ-ಸಿದ್ನಾಳ, ಜತ್ರಾಟ-ಭೀವಶಿ ಸೇತುವೆ ಹಾಗೂ ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಬೋಜ್, ಬೋಜವಾಡಿ-ಕುನ್ನೂರ, ಬೋಜ್-ಕುನ್ನೂರ, ಮಲ್ಲಿಕವಾಡ-ದತ್ತವಾಡ ಸೇತುವೆಗಳು ಮುಳುಗಡೆಯಾಗಿವೆ.
ಕಲ್ಲೊಳ್ಳ ಗ್ರಾಮದ ದತ್ತ ಮಂದಿರಕ್ಕೆ ನೀರು ನುಗ್ಗಿದ್ದು, ಜಿಲ್ಲಾಡಳಿತ ಸೇತುವೆಯ ಎರಡು ಬದಿಯಲ್ಲಿ ಬ್ಯಾರಿಕೆಡ್ ಹಾಕಿ ಸಂಚಾರವನ್ನು ನಿಷೇಧ ಮಾಡಿದೆ.
ಇದರಿಂದ ನದಿ ಪಾತ್ರದಲ್ಲಿ ಜನರಲ್ಲಿ ಮತ್ತೆ ಪ್ರವಾಹದ ಆತಂಕ ಆರಂಭವಾಗಿದೆ.