ಬೈಲಹೊಂಗಲ : ಮಾಜಿ ಸಿಎಂ ಯಡಿಯೂರಪ್ಪನವರ ಆಪ್ತ, ಬೈಲಹೊಂಗಲ ಮತಕ್ಷೇತ್ರದ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರನ್ನು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಇಂದು ಬೆಂಗಳೂರಿನ ಕಚೇರಿಯಲ್ಲಿ ಪಕ್ಷಕ್ಕೆ ಬರಮಾಡಿಕೊಂಡರು.
2013 ರ ಚುನಾವಣೆಯಲ್ಲಿ ವಿಶ್ವನಾಥ ಪಾಟೀಲ ಅವರು ಕೆಜೆಪಿ ಪಕ್ಷದಿಂದ ಆಯ್ಕೆಯಾಗಿ ನಂತರ ಬಿಜೆಪಿಯಲ್ಲಿದ್ದರು. 2018 ರ ಚುನಾವಣೆಯಲ್ಲಿ ಪಕ್ಷ ಟಿಕೇಟ ನೀಡಿದರೂ ಸಹ ಪಕ್ಷೇತರ ಅಭ್ಯರ್ಥಿಯ ಸ್ಪರ್ಧೆಯಿಂದ ಕಡಿಮೆ ಅಂತರದಿಂದ ಪರಾಭವಗೊಂಡಿದ್ದರು. ಆದರೂ ಸಹ ಕೋವಿಡದಂತಹ ಸಮಯದಲ್ಲಿ ಕ್ಷೇತ್ರದ ಮತದಾರರ ಜೊತೆಗಿದ್ದು ಅವರ ಔಷೋಧೋಪಚಾರ ಕುರಿತಂತೆ ಸಾಕಷ್ಟು ಜನಪರ ಕೆಲಸ ಮಾಡಿದ್ದರು.
ಪಕ್ಷವನ್ನು ಬೂತಮಟ್ಟದಿಂದ ಗಟ್ಟಿಗೊಳಿಸುವಲ್ಲಿ ಕಾರ್ಯಕರ್ತರ ಪಡೆ ಕಟ್ಟಿ ಪಕ್ಷವನ್ನು ಬೆಳೆಸಿದ್ದರು. 2023 ರ ಚುನಾವಣೆಯಲ್ಲಿ ಪಕ್ಷ ಟಿಕೇಟ ನೀಡದ್ದರಿಂದ ಅವರ ಬೆಂಬಲಿಗರು ಪಕ್ಷದ ತಮ್ಮ ಹುದ್ದೆಗಳಿಗೆ ರಾಜಿನಾಮೆ ನೀಡಿ ವಿಶ್ವನಾಥ ಪಾಟೀಲ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದರು.
ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿಶ್ವನಾಥ ಪಾಟೀಲ ಅವರ ಪಕ್ಷ ಸಂಘಟನೆಗೆ ಶ್ರಮಿಸಿರುವದನ್ನು ಪರಿಗಣಿಸಿ ಮತ್ತೆ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ವಿಧಾನಸಭೆ ವಿರೋದ ಪಕ್ಷದ ನಾಯಕ ಆರ್. ಅಶೋಕ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ ಸೇರಿದಂತೆ ಪಕ್ಷದ ಪ್ರಮುಖಕರು ಇದ್ದರು.
ವರದಿ : ರವಿಕಿರಣ್ ಯಾತಗೇರಿ