ಕೆಎಸ್ಎಂಎಫ್ ಅಧ್ಯಕ್ಷರಾಗಿ ಹುಕ್ಕೇರಿ ಶ್ರೀಗಳು ಆಯ್ಕೆ: ಮಲ್ಲಿಕಾರ್ಜುನ ತುಬಾಕಿ ಅವರಿಂದ ಸನ್ಮಾನ

  • 14 Jan 2024 , 11:50 PM
  • Belagavi
  • 473

ಬೆಳಗಾವಿ :ಕರ್ನಾಟಕ ಸ್ಟೇಟ್ ಮಿಡ್ ಡೇ ಮಿಲ್ಸ್ ಎನ್ ಜಿಒ ಫೆಡರೇಷನ್ ಬೆಂಗಳೂರಿನ ಅಧ್ಯಕ್ಷರಾಗಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರದ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ತಬಾಕಿ ಅವರು ಶ್ರೀಗಳನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ತುಬಾಕಿ ಅವರು, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಇಡೀ ರಾಜ್ಯದಲ್ಲಿ ಅಕ್ಷರ ದಾಸೋಹವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಇವತ್ತು ಕರ್ನಾಟಕದ 51 ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಕರ್ನಾಟಕ  ಸ್ಟೇಟ್ ಮಿಡ್ ಡೇ ಮಿಲ್ಸ್ ಎನ್ ಜಿಒ ಫೆಡರೇಷನ್ ಇದರ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮಗೆ ಸಂತೋಷ ತಂದಿದೆ. ಇವರ ಕಾರ್ಯ ಇನ್ನೂ ಹೆಚ್ಚು ಹೆಚ್ಚಾಗಿ ಆಗಲಿ. ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ಇನ್ನೂ ಹೆಚ್ಚಾಗಿ ನೀಡಲಿ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ, ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ‌, ಕೆಎಸ್ಎಂಎಫ್ ಅಧ್ಯಕ್ಷರನ್ನಾಗಿ ಎಲ್ಲರೂ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಒಂದು ಕಡೆ ಬಿಸಿ ಊಟ ಯೋಜನೆಯನ್ನು ನೋಡಿ ಜಾರಿಗೆ ತರುವುದೇ ಕಷ್ಟ. ಅಂಥದರಲ್ಲಿ 51 ಎನ್ ಜಿಒ ಕಾರ್ಯಗಳು ಮಾಡುವ ಬಗ್ಗೆ ಗಮನ ಹರಿಸಿ ಅವರಿಗೆ ಮಾರ್ಗದರ್ಶನ ಮಾಡುವುದು ತುಂಬಾ ಕಷ್ಟ. ಆದರೂ ಇದನ್ನು ಅಚ್ಚುಕಟ್ಟಾಗಿ ಮಾಡುತ್ತೇವೆ. ಜೊತೆಗೆ ಈ ಯೋಜನೆ ವಿಶೇಷವಾಗಿ 1975ರಲ್ಲಿ ಅಮೇರಿಕಾ ದೇಶದಲ್ಲಿ ಬೆಳಗಿನ ಉಪಹಾರ ಯೋಜನೆ ಪ್ರಾರಂಭವಾಯಿತು. ನಮ್ಮ ಭಾರತದಲ್ಲಿ 1995ರಲ್ಲಿ ಮಧ್ಯಾಹ್ನದ ಬಿಸಿ ಊಟ ಯೋಜನೆ ಪ್ರಾರಂಭಗೊಂಡು ಸುಮಾರು ಶಾಲೆಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಭಾರತದಲ್ಲಿ 12 ಕೋಟಿಗಿಂತ ಹೆಚ್ಚು ಮಕ್ಕಳು ಬಿಸಿ ಊಟದ ಯೋಜನೆಯ ಲಾಭ ಪಡೆಯುತ್ತಿದ್ದಾರೆ. 12 ಲಕ್ಷ 65 ಸಾವಿರ ಶಾಖೆಯಲ್ಲಿ ಈ ಯೋಜನೆ ಕಾರ್ಯರೂಪದಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಗಳನ್ನು ಯಶಸ್ವಿಗೊಳಿಸುವುದು ಎಲ್ಲರ ಕರ್ತವ್ಯ. ಸ್ವಯಂ ಸೇವಾ  ಸಂಸ್ಥೆಯ ಕಾರ್ಯಗಳಾಗಲಿ ಮತ್ತು ಶಾಲೆಯಲ್ಲಿ ತಯಾರಿಸುವ ಬಿಸಿ ಊಟದ ಕಾರ್ಯವಾಗಲಿ ಮಕ್ಕಳಿಗೆ ಅಚ್ಚುಕಟ್ಟಾದ ಆಹಾರ, ಹಾಲು, ಚೆಕ್ಕೆ, ಬಾಳೆಹಣ್ಣು ನೀಡುವುದು ಎಂದರು.

ಕೆಎಸ್ಎಂಎಫ್ ನ ಸೆಕ್ರೆಟರಿ, ಬೆಂಗಳೂರಿನ ಐಪಿಡಿಪಿಯ ಅಧ್ಯಕ್ಷ ಕೆ. ಭೀಮಾ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ 13 ಜಿಲ್ಲೆಗಳಲ್ಲಿ ಸುಮಾರು‌ 51 ಎನ್ ಜಿಒಗಳು ಕಾರ್ಯನಿರ್ವಹಿಸುತ್ತಿವೆ. ಇಸ್ಕಾನ್, ಅದಮ್ಯಚೇತನ, ಹುಕ್ಕೇರಿಯ ಗುರುಶಾಂತೇಶ್ವರ ಜನ ಕಲ್ಯಾಣ ಪ್ರತಿಷ್ಠಾನ ಹಾಗೂ ನಮ್ಮ ಐಪಿಡಿಪಿ ಸೇರಿದಂತೆ ಅನೇಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟಾರೆ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ನಮ್ಮ ಯೋಜನೆ ಯಶಸ್ವಿಗೊಳ್ಳುತ್ತದೆ ಎನ್ನುವುದರಲ್ಲಿ ಎರಡುಮಾತಿಲ್ಲ ಎಂದರು.
ಕೆಎಸ್ಎಂಎಫ್ ನ ಉಪಾಧ್ಯಕ್ಷರಾಗಿ ಬೆಂಗಳೂರಿನ ‌ಮಹಾಂತೇಶ ಕಿವುಡಸಣ್ಣವರ, ಬೆಳಗಾವಿಯ ನಾರಾಯಣ ಸೊಗಲೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಅಪ್ಪಾಜಿಗೌಡ ಜಂಟಿ ಕಾರ್ಯದರ್ಶಿಯಾಗಿ, ಬಾಗಲಕೋಟೆಯ ಶ್ರೀಥರ ಶೆಟ್ಟರ, ಬಸವರಾಜ ಕಾಜಗಾರ ಮತ್ತು ಬೆಂಗಳೂರಿನ ರವೀಂದ್ರ ಅವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಎಂ.ಕೆ.ಹುಬ್ಬಳ್ಳಿಯ 
ಕಲ್ಲಪ್ಪ ಬೋರಣ್ಣವರ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಮುಂಬರುವ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಬಿಸಿ ಊಟ ತಯಾರಿಸುವ ಅಡುಗೆ ಸಿಬ್ಬಂದಿಗಳಿಗೆ ಫೆಡರೇಷನ್ ವತಿಯಿಂದ  ತರಬೇತಿ ನೀಡಲಾಗುವುದು.

Read All News