ಕೆಪಿಸಿಸಿ ಅಧ್ಯಕ್ಷ ರೇಸ್‌ನಲ್ಲಿ ನಾನಿಲ್ಲ : ಜಾರಕಿಹೊಳಿ

  • shivaraj bandigi
  • 22 May 2024 , 4:29 PM
  • Bengaluru
  • 2023

ಬೆಂಗಳೂರು: ನಾನು ಕೆಪಿಸಿಸಿ ಅಧ್ಯಕ್ಷರ ರೇಸ್‌ನಲ್ಲಿ ಇಲ್ಲ, ಅದು ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೊದಲು ಅಧ್ಯಕ್ಷ ಸ್ಥಾನ ಖಾಲಿ ಆಗಬೇಕು ಅಲ್ವಾ. ಅಧಿಕಾರ ವಿಸ್ತರಣೆಯೂ ಆಗಬಹುದಲ್ವಾ? ಸಮರ್ಥರಿಗೆ ಕೊಡಿ ಎಂದು ಕೇಳುತ್ತೇನೆ. ಸಾಮರ್ಥ್ಯ ಇರೋರಿಗೆ ಕೊಡಿ. ರಾಜ್ಯ ಗೊತ್ತಿರುವವರಿಗೆ, ರಾಜ್ಯ ಸುತ್ತಿದವರಿಗೆ ಕೊಡಿ ಎಂದು ಕೇಳುತ್ತೇನೆ ಎಂದರು.

ಅಧಿಕಾರ ಹಂಚಿಕೆ ದಕ್ಷಿಣ ಕರ್ನಾಟಕ ಭಾಗಕ್ಕೆ ಸಿಗುತ್ತಿದೆ. ಉತ್ತರ ಕರ್ನಾಟಕಕ್ಕೆ ಸಿಗುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಎಂಎಲ್‌ಸಿ (MLC) ಸ್ಥಾನ ಕೂಡ ನಮ್ಮ ಭಾಗಕ್ಕೆ ಸಿಗಬೇಕು. ಬೆಂಗಳೂರು ಅಷ್ಟೇ ಅಲ್ಲ ಉತ್ತರ ಕರ್ನಾಟಕಕ್ಕೂ ಬಾಂಬೆ, ಹೈದರಾಬಾದ್ ಕರ್ನಾಟಕಕ್ಕೆ ಕೊಟ್ಟರೆ ಪಕ್ಷಕ್ಕೆ, ಸಮುದಾಯಕ್ಕೆ ಅನುಕೂಲ ಆಗುತ್ತದೆ. ಬೆಂಗಳೂರಿನಲ್ಲಿ ಇದ್ದವರಿಗೆ ಕೊಟ್ಟರೆ ಪಕ್ಷಕ್ಕೆ ಅನುಕೂಲ ಆಗಲ್ಲ. ಕನಿಷ್ಟ 2 ಆದರೂ ಕೊಡಬೇಕು ಎಂದು ಹೇಳಿದರು.

ಇದೇ ವೇಳೆ ಕರ್ನಾಟಕದಿಂದ ಪ್ರಧಾನಿ ರೇಸ್‌ನಲ್ಲಿ ಯಾರೂ ಇಲ್ಲ ಎಂಬ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ನಮ್ಮಲ್ಲೂ ಪ್ರಧಾನಿ ಆಗಲು ಸಮರ್ಥರಿದ್ದಾರೆ. ಸಿಎಂ ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಇಂಡಿಯಾ ಮೈತ್ರಿಕೂಟ ಕೇಂದ್ರದಲ್ಲಿ ಹೆಚ್ಚಿನ ಸ್ಥಾನ ಗಳಿಸುವ ವಿಶ್ವಾಸ ಇದೆ. ಹೆಚ್ಚು ಸ್ಥಾನ ನಮಗೆ ಬಂದರೆ ಪ್ರಧಾನಿ ಹುದ್ದೆಯನ್ನು ನಾವು ಕ್ಲೈಮ್ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.

Read All News