ಸಿ.ಟಿ.ರವಿ ರಾಜ್ಯಾಧ್ಯಕ್ಷರಾದರೆ ಶುಭ ಹಾರೈಸುವೆ : ಮಾಜಿ ಡಿಸಿಎಂ ಸವದಿ

  • Shivaraj Bandigi
  • 14 Jan 2024 , 11:59 PM
  • Belagavi
  • 380

ಬೆಳಗಾವಿ : ಬಿಜೆಪಿ ರಾಷ್ಟ್ರೀಯ ಪಕ್ಷ. ಅಧಿವೇಶನ ಮುಗಿದರೂ ಇವರಿಗೆ ವಿಪಕ್ಷ ನಾಯಕ ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಬಿಜೆಪಿ ಇಂಥ ಹೊಸ ಹೊಸ ಇತಿಹಾಸ ಬರೆಯುವ ಕೆಲಸ ಮಾಡುತ್ತಿರುತ್ತದೆ ಎಂದು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಸೋಮವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 
ಬಿಜೆಪಿಯವರು ರಾಜ್ಯಾಧ್ಯಕ್ಷ ಯಾರನ್ನು ಮಾಡುತ್ತಾರೆ, ಬಿಡುತ್ತಾರೆ ಅದು ನಮಗೆ ಅವಶ್ಯಕತೆ ಇಲ್ಲ. ಆದರೆ ದುರ್ದೈವದ ಸಂಗತಿ ಎಂದರೆ ಬಿಜೆಪಿ ರಾಷ್ಟ್ರೀಯ ಪಕ್ಷ. ಅಧಿವೇಶನ ಮುಗಿದರೂ ಕೂಡ ವಿರೋಧ ಪಕ್ಷದ ನಾಯಕನ ಇಲ್ಲದೆ ಇರುವುದು ದುದರಂತದ ಕತೆ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಇಲ್ಲದೆ ಚರ್ಚೆ ನಡೆದಿದ್ದು ರಾಜ್ಯದಲ್ಲಿ ಇದೇ ಮೊದಲನೇ ಬಾರಿಗೆ. ಹೊಸ ಹೊಸ ಇತಿಹಾಸ ಬರೆಯುವ ಕೆಲಸ ಬಿಜೆಪಿ ಮಾಡುತ್ತದೆ ಎಂದರು.

ಗೆಳೆತನಕ್ಕೆ ಹಾಗೂ ರಾಜಕೀಯಕ್ಕೆ ಸಾಕಷ್ಟು ವ್ಯತ್ಯಾಸ ಇದೆ. ಸಿ.ಟಿ.ರವಿ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಾರೆ ಎನ್ನುವ ಊಹೆಗಳು ಎದ್ದಿದ್ದಾವೆ. ಅವರು ರಾಜ್ಯಾಧ್ಯಕ್ಷರಾದರೆ ನಾನು ಶುಭ ಕೋರುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಹೊಸ‌ ಸರಕಾರ ರಚನೆಯಾದ ಮೇಲೆ ಶಾಸಕರ ಬೇಕು ಬೇಡಿಕೆಯ ಬಗ್ಗೆ ಮುಖ್ಯಮಂತ್ರಿಗಳಿಗೆ ಹೇಳುವುದು ವಾಡಿಕೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ಕರೆದ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ಸಭೆ ಮುಂದೆ ಹೋಗಿತ್ತು.‌ ಕಾಂಗ್ರೆಸ್ ನಲ್ಲಿ ಯಾವುದೇ ಅಸಮಾಧಾನ ಅಥವಾ ವಿಪಕ್ಷದವರು ಮಾಡಿರುವ ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ  ಎಂದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಲಕ್ಷ್ಮಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಅವರಿಗೆ ಟಾಸ್ಕ್ ನೀಡಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಟಾಸ್ಕ್ ಅಲ್ಲ. ಪಕ್ಷ ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ‌ ನಿಭಾಯಿಸುತ್ತೇನೆ. ಟಾಸ್ಕ್ ಅಂತ ಅಲ್ಲ ಎಲ್ಲರ ಹೊಣೆಗಾರಿಕೆ ಅದು. ಆ.2 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ಕರೆದಿದ್ದಾರೆ. ಆ ಸಭೆ ಹೋಗುತ್ತೇವೆ. ಅಲ್ಲಿ ನೀಡುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತೇವೆ ಎಂದರು.

Read All News