ಗಂಗಾವತಿ : ದೇವರು ದೇಹಕ್ಕೆ ಜೀವ ತುಂಬಿದರೆ, ಆ ಜೀವವನ್ನು ಕಾಪಾಡುವ ದೇವರುಗಳು ಅಂದರೆ ವೈದ್ಯರು. ಅದಕ್ಕೆ ವೈದ್ಯೋ ನಾರಾಯಣೋ ಹರಿ ಯಂದು ಕರೆಯುತ್ತಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ವೈದ್ಯರ ಗುಣಗಾನ ಮಾಡಿದ್ದಾರೆ.
ಗಂಗಾವತಿ ನಗರದ ಉಪ ವಿಭಾಗ ಆಸ್ಪತ್ರೆ ಸಭಾ ಭವನದಲ್ಲಿ ನಡೆದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಅಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ನಾರಾಯಣ ಹೃದಯಾಲಯ ಉತ್ತಮವಾದ ಕೆಲಸವನ್ನು ಮಾಡುತ್ತಿದೆ
ಮತ್ತು ಅದು ಗಂಗಾವತಿ ತಾಲ್ಲೂಕಿನಲ್ಲಿನ ಶಾಲೆಗಳಿಗೆ ಹೋಗಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಅವರಲ್ಲಿರುವ ಹೃದಯ ಸಂಬಂಧಿ ಕಾಯಿಲೆಗಳನ್ನು ಗುರುತಿಸಿ ಅವರಿಗೆ ಚಿಕಿತ್ಸೆಯನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.
ಅದರ ಜೊತೆಯಲ್ಲಿ ಯಾವ ಮಕ್ಕಳಿಗೆ ಶಸ್ತ್ರಚಿಕಿತ್ಸೆಯ ಅಗತ್ಯ ಇದೆಯೋ ಅಂತಹವರಿಗೆ ಬೆಂಗಳೂರಿನಲ್ಲಿ ಉಚಿತ ಶಸ್ತ್ರಚಿಕಿತ್ಸೆ ಯನ್ನು ಸಹ ಮಾಡಲಾಗುತ್ತದೆ. ಇಂತಹ ಕಾರ್ಯ ಮಾಡುತ್ತಿರುವ ನಾರಾಯಣ ಹೃದಯಾಲಯ ಕಾರ್ಯ ಶ್ಲಾಘನೀಯ ಎಂದರು.
ಈ ಕಾರ್ಯಕ್ರಮದಲ್ಲಿ ನಾರಾಯಣ ಹೃದಯಾಲಯದ ಡಾ.ಅರುಣ, ಡಾ.ಶರಣಪ್ಪ , ಡಾ.ಈಶ್ವರ ಸವಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.